ಹೊಸದುರ್ಗ: ತಾಲ್ಲೂಕಿನ ಅತ್ತಿಮಗ್ಗೆ ಸಮೀಪ ಶನಿವಾರ ತಡರಾತ್ರಿ ‘108 ಆಂಬುಲೆನ್ಸ್’ ವಾಹನದಲ್ಲಿ ದೇವಪುರ ಭೋವಿಹಟ್ಟಿಯ ಮೀನಾಕ್ಷಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.
ತಡರಾತ್ರಿ 12.30ರ ಸುಮಾರಿನಲ್ಲಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ತೆರಳುತ್ತಿದ್ದ ಮೀನಾಕ್ಷಿ ಅವರಿಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿತು. ಹೀಗಾಗಿ ಆಂಬುಲೆನ್ಸ್ ಸಿಬ್ಬಂದಿ ಸುರೇಶ್ ಮತ್ತು ಮಂಜುನಾಥ ಸ್ವಾಮಿ ವಾಹನವನ್ನು ರಸ್ತೆ ಬದಿಗೆ ನಿಲ್ಲಿಸಿ, ಅಲ್ಲೇ ಹೆರಿಗೆ ಮಾಡಿಸಿದರು.
ತಾಯಿ ಹಾಗೂ ಮಕ್ಕಳು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಆರೋಗ್ಯವಾಗಿದ್ದಾರೆ. ಸಮಯ ಪ್ರಜ್ಞೆ ಮೆರೆದ ಆಂಬುಲೆನ್ಸ್ ಸಿಬ್ಬಂದಿಗೆ ಮೀನಾಕ್ಷಿ ಸಂಬಂಧಿಕರು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.