ಸುರಪುರ: ‘ಎಲ್ಲ ಧರ್ಮಗಳು ಒಳ್ಳೆಯ ದನ್ನೇ ಬೋಧಿಸಿವೆ. ಮಾನವೀಯ ಮೌಲ್ಯಗಳನ್ನೆ ಪ್ರತಿಪಾದಿಸುತ್ತವೆ. ಆದರೆ, ಪಾಲನೆ ಯಲ್ಲಿ ಎಡವಟ್ಟಾಗುತ್ತಿದೆ’ ಎಂದು ಶಾಸಕ ರಾಜಾ ವೆಂಕಟಪ್ಪ ನಾಯಕ ಹೇಳಿದರು.
ರಂಗಂಪೇಟೆಯ ವೀರಶೈವ ಕಲ್ಯಾಣ ಮಂಟಪದಲ್ಲಿ ಜಮಾತೆ ಇಸ್ಲಾಮ್ ಹಿಂದ್ ಸಂಘಟನೆ ಶನಿವಾರ ಹಮ್ಮಿ ಕೊಂಡಿದ್ದ ಕುರಾನ್ ಕನ್ನಡ ಪ್ರವಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಬಹುಭಾಷಾ ಸಂಸ್ಕೃತಿ ಒಳಗೊಂಡಿ ರುವ ಭಾರತದಲ್ಲಿ ಅನೇಕ ಜಾತಿ ಧರ್ಮ ಗಳು ನೆಲೆಸಿವೆ. ಒಂದೇ ನಾಡಿನಲ್ಲಿ ಜನಿಸಿ ರುವ ನಾವೆಲ್ಲ ನಮ್ಮ ಜಾತಿ, ಧರ್ಮಗಳ ನ್ನು ಬದಿಗಿಟ್ಟು ಭಾವೈಕ್ಯದಿಂದ ಬದುಕಬೇಕು’ ಎಂದರು.
ಗುರುಮಠಕಲ್ ಖಾಸಾ ಮಠದ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ‘ಮಕ್ಕಳಿಗೆ ಕೂಡಿ ಕಳೆಯುವ ಲೆಕ್ಕ ಹೇಳುವ ಬದಲು ಸಹೋದರತೆಯಿಂದ ಬಾಳುವುದನ್ನು ಕಲಿಸಬೇಕಾಗಿದೆ. ಈ ನಿಟ್ಟಿನಲ್ಲಿ ಧರ್ಮದ ಧರ್ಮಗುರುಗಳು ಪರಸ್ಪರ ಭಾತೃತ್ವ ಬೆಸೆಯುವ ಸಂಸ್ಕಾರವನ್ನು ಜನರಿಗೆ ನೀಡಬೇಕು’ ಎಂದು ಹೇಳಿದರು.
‘ಮಾನವ ಹಕ್ಕುಗಳ ಉಲ್ಲಂಘನೆ ಎಲ್ಲ ಧರ್ಮಗಳಲ್ಲಿ ಅವ್ಯಾಹತವಾಗಿ ನಡೆದಿದೆ. ಇದನ್ನು ಪ್ರಶ್ನಿಸುವ ಮನೋಭಾವ ಬರುತ್ತಿಲ್ಲ. ಮನುಷ್ಯರನ್ನು ಎಲ್ಲಿಯವರೆಗೆ ನಾವು ಮನುಷ್ಯರಂತೆ ಕಾಣುವುದಿಲ್ಲವೋ, ಪ್ರೀತಿಸು ವುದಿಲ್ಲ ವೋ ಅಲ್ಲಿವರೆಗೆ ಐಕ್ಯತೆ ಮೂಡಲು ಸಾಧ್ಯವಿಲ್ಲ’ ಎಂದರು.
‘ಶರಣರು, ಸೂಫಿ ಸಂತರು ಭಾವೈಕ್ಯ ಗಟ್ಟಿಗೊಳಿಸಲು ಜೀವನ ಮುಡಿಪಾಗಿಟ್ಟಿದ್ದರು. ದೇಶಕ್ಕೆ ಶರಣ ಸಂತ, ಸೂಫಿಗಳ ಸಂದೇಶ ಹಿಂದಿಗಿಂತಲೂ ಅವಶ್ಯಕ ವಾಗಿವೆ’ ವಾಲ್ಮೀಕಿ ಆಶ್ರಮದ ವರ ದಾನೇಶ್ವರ ಸ್ವಾಮೀಜಿ ನುಡಿದರು.
ವಕೀಲರಾದ ಜಯಲಲಿತಾ ಪಾಟೀಲ ಮಾನವ ಹಕ್ಕುಗಳ ಕುರಿತು ಉಪನ್ಯಾಸ ನೀಡಿದರು. ರಾಜಾ ಲಕ್ಷ್ಮಿ ನಾರಾಯಣ ನಾಯಕ, ನಗರಸಭೆ ಅಧ್ಯಕ್ಷೆ ಕವಿತಾ ಶಿವುಕುಮಾರ ಎಲಿಗಾರ, ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಸೂಗೂರೇಶ ವಾರದ, ವಕೀಲರ ಸಂಘದ ಅಧ್ಯಕ್ಷ ಎಸ್. ಸಿದ್ರಾಮಪ್ಪ, ಲಕ್ಷ್ಮಿ ಕವಲಿ, ಅಂಬೇಡ್ಕರ್ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಭೀಮಣ್ಣ ಬಿಲ್ಲವ ಇದ್ದರು. ಪುತ್ತೂರಿನ ಇಸ್ಪಾಕ್ ಸಾಹೇಬ ಕನ್ನಡದಲ್ಲಿ ಕುರಾನ್ ಪ್ರವಚನ ನೀಡಿದರು.