ಕನಕಗಿರಿ: ಕ್ಷೇತ್ರದಲ್ಲಿ ಮೂರು ವರ್ಷದಿಂದ ಮಳೆ ಇಲ್ಲದೆ ಜನತೆ ಕಂಗಾಲಾಗಿದ್ದು, ಕೂಲಿಕಾರ್ಮಿಕರು ಗುಳೆ ಹೋಗುತ್ತಿದ್ದರೂ ಶಾಸಕ ಶಿವರಾಜ ತಂಗಡಗಿ ಅವರಿಗೆ ಕನಿಷ್ಠ ಕಾಳಜಿ ಇಲ್ಲ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಡಾ.ದೊಡ್ಡಯ್ಯಸ್ವಾಮಿ ಆರೋಪಿಸಿದರು.
ಇಲ್ಲಿನ ಎಪಿಎಂಸಿ ಕಚೇರಿಯಲ್ಲಿ ಭಾನುವಾರ ಬಿಜೆಪಿ ಮಹಿಳಾ ಮೋರ್ಚಾ ಆಯೋಜಿಸಿದ್ದ ಮಹಿಳಾ ಸಮಾವೇಶ ಹಾಗೂ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಸಮಸ್ಯೆಗಳಿಗೆ ಸ್ಪಂದಿಸುವ ಬದಲಾಗಿ ಶಾಸಕರು ಚುನಾವಣೆ ಗಿಮಿಕ್ಗಾಗಿ ಮಹಿಳಾ ದಿನಾಚರಣೆ ಆಚರಿಸುತ್ತಿದ್ದಾರೆ ಎಂದು ಟೀಕಿಸಿದರು.
ಬ್ಲಾಕ್ ಬಿಜೆಪಿ ಅಧ್ಯಕ್ಷ ಶಿವಶರಣೆಗೌಡ, ಎಸ್ಟಿ ಮೋರ್ಚಾ ಕಾರ್ಯದರ್ಶಿ ನಾಗರಾಜ ಬಿಲ್ಗಾರ, ಮಹಿಳಾ ಮೋರ್ಚಾ ಅಧ್ಯಕ್ಷೆ ರತ್ನಕುಮಾರಿ, ಶಕ್ತಿ ಕೇಂದ್ರದ ಅಧ್ಯಕ್ಷ ವಾಗೀಶ ಹಿರೇಮಠ ಅವರು ಶಾಸಕ ಶಿವರಾಜ ತಂಗಡಗಿ ಅವರನ್ನು ಟೀಕಿಸಿದರು.
ಎಸ್ಸಿ ಮೋರ್ಚಾ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯೆ ಬಸವರಾಜ ಧಡೆಸೂಗರು, ದುರಗಪ್ಪ ಧಡೆಸೂಗರು, ಪಟ್ಟಣ ಪಂಚಾಯಿತಿ ಸದಸ್ಯರಾದ ಕೆ.ಸುಭಾಸ, ಮಂಜುನಾಥ ಮಾದಿನಾಳ, ಬ್ಲಾಕ್ ಉಪಾಧ್ಯಕ್ಷ ಶರಣಪ್ಪ ಭಾವಿಕಟ್ಟಿ, ಯುವ ಮೋರ್ಚಾ ಉಪಾಧ್ಯಕ್ಷ ಹನುಮೇಶ ವಾಲೇಕಾರ, ನಗರ ಘಟಕದ ಅಧ್ಯಕ್ಷ ಪ್ರಕಾಶ ಹಾದಿಮನಿ, ಎಸ್ಸಿ ಮೋರ್ಚಾ ಅಧ್ಯಕ್ಷ ಕಂಠೆಪ್ಪ ಮ್ಯಾಗಡೆ, ಮಾಜಿ ಅಧ್ಯಕ್ಷ ಸಣ್ಣ ಕನಕಪ್ಪ, ಶಕ್ತಿ ಕೇಂದ್ರದ ಉಪಾಧ್ಯಕ್ಷ ಬಸವರಾಜ ಕೋರಿ, ರಂಗಪ್ಪ ಕೊರಗಟಗಿ ಇದ್ದರು. ಜೆಡಿಎಸ್ ಮುಖಂಡರಾದ ದೇವಮ್ಮ ಮತ್ತಿತರರು ಬಿಜೆಪಿ ಸೇರ್ಪಡೆಯಾದರು.
ಮಹಿಳಾ ಸಮಾವೇಶಕ್ಕೆ ಬಿಜೆಪಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಭಾಗ್ಯವತಿ ಮಾಣಿಕ ಭೋಲಾ, ಸ್ವಾತಿ ಜಿ. ರಾಮಮೋಹನ ಗೈರು ಎದ್ದು ಕಾಣುತ್ತಿತು. ಪಕ್ಷದಿಂದ ಮಹಿಳಾ ಸಮಾವೇಶ ಆಯೋಜಿಸಿದ ಬಗ್ಗೆ ತಮಗೆ ಯಾರು ಮಾಹಿತಿ ನೀಡಿಲ್ಲ. ಹೀಗಾಗಿ ಭಾಗವಹಿಸಿಲ್ಲ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಭಾಗ್ಯವತಿ ಮಾಣಿಕ ಭೋಲಾ ‘ಪ್ರಜಾವಾಣಿ’ಗೆ ತಿಳಿಸಿದರು.