ಲಖನೌ: ಮುಸ್ಲಿಮರ ‘ತ್ರಿವಳಿ ತಲಾಖ್’ ಬಗ್ಗೆ ದನಿ ಎತ್ತಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಇದನ್ನು ಮಹಾಭಾರತದ ದ್ರೌಪದಿ ವಸ್ತ್ರಾಪಹರಣಕ್ಕೆ ಹೋಲಿಸಿದ್ದಾರೆ. ಅಲ್ಲದೇ ಈ ವಿಚಾರದಲ್ಲಿ ರಾಜಕೀಯ ಮುಖಂಡರು ಮೌನವಹಿಸಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ.
‘ತ್ರಿವಳಿ ತಲಾಖ್’ ಹೆಸರಿನಲ್ಲಿ ಮುಸ್ಲಿಂ ಮಹಿಳೆಯರ ಮೇಲಾಗುತ್ತಿರುವ ಶೋಷಣೆ ನಿಲ್ಲಬೇಕು ಮತ್ತು ಅವರಿಗೆ ನ್ಯಾಯ ದೊರೆಯಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭುವನೇಶ್ವರದಲ್ಲಿ ಮುಕ್ತಾಯಗೊಂಡ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಮಾತನಾಡಿದ ಬೆನ್ನಲ್ಲೇ ಯೋಗಿ ಆದಿತ್ಯನಾಥ ಈ ಪ್ರತಿಕ್ರಿಯೆ ನೀಡಿದ್ದಾರೆ.
ತ್ರಿವಳಿ ತಲಾಖ್ ರಾಷ್ಟ್ರವ್ಯಾಪಿ ಚರ್ಚೆಯ ವಿಷಯವಾಗಿದೆ. ಆದರೂ ಕೆಲವು ರಾಜಕೀಯ ಮುಖಂಡರು ಈ ವಿಚಾರದಲ್ಲಿ ಮೌನಕ್ಕೆ ಶರಣಾಗಿದ್ದಾರೆ ಎಂದರು. ಮಹಾಭಾರತದಲ್ಲಿ ದ್ರೌಪದಿ ವಸ್ತ್ರಾಪಹರಣದ ವೇಳೆ ಇಡೀ ಸಭೆಯೂ ಮೌನ ವಹಿಸಿತ್ತು.
ಈ ವೇಳೆ ದ್ರೌಪದಿಯೂ ಇದಕ್ಕೆ ಯಾರು ಜವಾಬ್ದಾರರು ಎಂದು ಪ್ರಶ್ನಿಸಿದ್ದಳು? ಈ ವೇಳೆ ಯಾರೊಬ್ಬರು ಮಾತನಾಡಲಿಲ್ಲ. ಆಗ ಮಾತನಾಡಿದ ವಿಧುರ, ಯಾರು ಅಪರಾಧ ಎಸಗುತ್ತಾರೋ ಅಥವಾ ಮೌನದಿಂದ ಇರುತ್ತಾರೋ ಅವರೇ ಇದಕ್ಕೆ ಜವಾಬ್ದಾರರು ಎಂದು ಹೇಳಿದ್ದನು.
ಇದನ್ನು ಆಧರಿಸಿ ಮಾತನಾಡಿದ ಯೋಗಿ ಆದಿತ್ಯನಾಥ್ ಅವರು ‘ಮಹಾಭಾರತದಲ್ಲಿ ದ್ರೌಪದಿ ವಸ್ತ್ರಾಪಹರಣ ಸಮಯದಲ್ಲಿ ಘಟಿಸಿದ ಎಲ್ಲಾ ಸಂಗತಿಗಳು ತ್ರಿವಳಿ ತಲಾಖ್ ವಿಚಾರದಲ್ಲಿ ಮರುಕಳಿಸುತ್ತಿರುವಂತೆ ಕಾಣುತ್ತಿವೆ. ತ್ರಿವಳಿ ತಲಾಖ್ ಬಗ್ಗೆ ರಾಜಕೀಯ ನಾಯಕರು ಮೌನ ವಹಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ.