ಕೋಲಾರ: ‘ಜಿಲ್ಲೆಯಲ್ಲಿ 11,373 ಎಕರೆ ಪ್ರದೇಶದಲ್ಲಿ ಹಸಿರು ಮೇವು ಬೆಳೆಯಲಾಗಿದ್ದು, 6ರಿಂದ 7 ವಾರಗಳಿಗೆ ಸಾಕುಗುವಷ್ಟು ಮೇವು ಲಭ್ಯವಿದೆ’ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕಚಂದ್ರ ತಿಳಿಸಿದರು.
ನಗರದಲ್ಲಿ ಸೋಮವಾರ ನಡೆದ ಬರ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ಹಸಿರು ಮೇವು ಬೆಳೆ ಆಂದೋಲನ ಹಮ್ಮಿಕೊಂಡಿದ್ದು, ಇದರಿಂದ ಹೈನುಗಾರಿಕೆಗೆ ಅನುಕೂಲವಾಗಿದೆ. ಬೇಸಿಗೆಯಲ್ಲೂ ಹಸಿರು ಮೇವು ಲಭ್ಯವಿದೆ’ ಎಂದು ತಿಳಿಸಿದರು.
‘ಮೇವು ಬೆಳೆ ಆಂದೋಲನವನ್ನು ವಿವಿಧ ಹಂತಗಳಲ್ಲಿ ನಡೆಸುತ್ತಿದ್ದು, ಇದೀಗ ಮೂರು ಹಂತ ಮುಗಿದು ನಾಲ್ಕನೇ ಹಂತಕ್ಕೆ ಕಾಲಿಡಲಾಗಿದೆ. ಮಾಲೂರು ತಾಲ್ಲೂಕಿನಲ್ಲಿ 1,814 ಎಕರೆಯಲ್ಲಿ ಹಸಿರು ಮೇವು ಬೆಳೆದಿದ್ದು, ಇನ್ನೂ 2,058 ಎಕರೆಯಲ್ಲಿ ಮೇವು ಬೆಳೆಯಲು ಉದ್ದೇಶಿಸಲಾಗಿದೆ. ಅದೇ ರೀತಿ ಶ್ರೀನಿವಾಸಪುರದಲ್ಲಿ 1,567 ಎಕರೆಯಲ್ಲಿ ಮೇವು ಬೆಳೆದಿದ್ದು, 3,362 ಎಕರೆಯಲ್ಲಿ ಮೇವು ಬೆಳೆಯಬೇಕಿದೆ’ ಎಂದರು.
‘ಮುಳಬಾಗಿಲು ತಾಲ್ಲೂಕಿನಲ್ಲಿ 3,140 ಎಕರೆಯಲ್ಲಿ ಮೇವು ಬೆಳೆದಿದ್ದು, ಇನ್ನೂ 4,033 ಎಕರೆಯಲ್ಲಿ ಮೇವು ಬೆಳೆಯಬೇಕು. ಕೋಲಾರ ತಾಲ್ಲೂಕಿನಲ್ಲಿ 2,723 ಎಕರೆಯಲ್ಲಿ ಮೇವು ಬೆಳೆಯಲಾಗಿದ್ದು, 3,536 ಎಕರೆಯಲ್ಲಿ ಹೊಸದಾಗಿ ಬೆಳೆಯಬೇಕು.
ಬಂಗಾರಪೇಟೆ ತಾಲ್ಲೂಕಿನಲ್ಲಿ 2,129 ಎಕರೆಯಲ್ಲಿ ಹಸಿರು ಮೇವು ಬೆಳೆದಿದ್ದು, ಇನ್ನೂ 3,585 ಎಕರೆಯಲ್ಲಿ ಮೇವು ಬೆಳೆಯುವ ಗುರಿ ಇದೆ’ ಎಂದು ವಿವರಿಸಿದರು.
ಜಿಲ್ಲೆಯಲ್ಲಿನ ಕುಡಿಯುವ ನೀರಿನ ಸಮಸ್ಯೆ, ಕೊಳವೆ ಬಾವಿಗಳ ಸ್ಥಿತಿಗತಿ ಕುರಿತು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಉಪ ವಿಭಾಗಾಧಿಕಾರಿ ಸಿ.ಎನ್.ಮಂಜುನಾಥ್, ತಹಶೀಲ್ದಾರ್ ವಿಜಯಣ್ಣ ಪಾಲ್ಗೊಂಡಿದ್ದರು.