ಗುಡಿಬಂಡೆ: ನೀರಿಗಾಗಿ ಕಾಡು ಪ್ರಾಣಿಗಳು ನಾಡಿನತ್ತ ಮುಖ ಮಾಡುತ್ತಿರುವ ಕಾರಣ ಅರಣ್ಯ ಇಲಾಖೆ ಅಧಿಕಾರಿ ಹುಲುಗಪ್ಪ ಮತ್ತು ಸಿಬ್ಬಂದಿ ಸ್ವಯಂ ಪ್ರೇರಣೆಯಿಂದ ಕಾಡಿನಲ್ಲಿಯೇ ಕುಡಿಯುವ ನೀರು ದೊರೆಯುವ ವ್ಯವಸ್ಥೆ ಮಾಡುತ್ತಿದ್ದಾರೆ.
ಆಹಾರ ಮತ್ತು ನೀರು ಅರಸಿ ಪ್ರಾಣಿಗಳು ನಾಡಿನತ್ತ ಬರುತ್ತಿರುವ ಘಟನೆಗಳು ತಾಲ್ಲೂಕಿನಲ್ಲಿ ಇತ್ತೀಚೆಗೆ ಹೆಚ್ಚುತ್ತಿವೆ. ಕೆಲವು ಪ್ರದೇಶಗಳಲ್ಲಿ ಗುಂಡಿ ತೆಗೆದು ಅಲ್ಲಿಗೆ ನೀರು ತುಂಬಿಸುತ್ತಿದ್ದಾರೆ. ಇವರ ಈ ಕಾರ್ಯಕ್ಕೆ ಪರಿಸರ ಹಾಗೂ ವನ್ಯಜೀವಿ ಪ್ರೇಮಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
‘ಕಾಡಿನಲ್ಲಿರುವ ಕೆರೆ ಕುಂಟೆಗಳು ಬತ್ತಿವೆ. ಕೆಲವು ದಿನಗಳ ಹಿಂದೆ ನೀರು ಹುಡುಕಿ ಬಂದ ಜಿಂಕೆ ಗಾಯ ಗೊಂಡಿತ್ತು. ಇಲಾಖೆ ಅಧಿಕಾರಿ ಜಾವೀದ್ ರಕ್ಷಿಸಿ ಕಾಡಿಗೆ ಬಿಟ್ಟಿದ್ದರು.
ಮುಂದೆ ಈ ರೀತಿಯ ಅನಾಹುತಗಳ ನಡೆಯಬಾರದು ಎಂದು ಕಾಡಿನಲ್ಲಿ ಅಲ್ಲಲ್ಲಿ ಹೊಂಡಗಳನ್ನು ತೆಗೆಸಿ, ಪಾಲಿಥಿನ್ ಹೊದಿಕೆ ಹೊದಿಸಿ ಟ್ಯಾಂಕರ್ ಮೂಲಕ ನೀರು ತುಂಬಿಸುತ್ತಿದ್ದೇವೆ’ ಎಂದು ತಿಳಿಸಿದರು ಹುಲುಗಪ್ಪ. ‘ಮಳೆಗಾಲ ಪ್ರಾರಂಭವಾಗುವವರೆಗೂ ನೀರು ತುಂಬಿಸುವ ವ್ಯವಸ್ಥೆ ಮಾಡಲಾಗಿದೆ’ ಎಂದು ಅವರು ತಿಳಿಸಿದರು.