ಲಿಂಗಸುಗೂರು: ರಾಜ್ಯ ಸರ್ಕಾರ ಮಕ್ಕಳಲ್ಲಿ ಪಠ್ಯೇತರ ಚಟುವಟಿಕೆಗಳ ಕ್ರಿಯಾಶೀಲತೆ ಹೆಚ್ಚಿಸಲು ಜಾರಿಗೆ ತಂದಿರುವ ಬೇಸಿಗೆ ಸಂಭ್ರಮ ಯೋಜನೆ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರಿಯಾಗಿದ್ದು ಪಾಲಕರು ಪ್ರೋತ್ಸಾಹಿಸುವಂತೆ ಶಾಸಕ ಮಾನಪ್ಪ ವಜ್ಜಲ ಮನವಿ ಮಾಡಿದರು.
ಸೋಮವಾರ ಬೇಸಿಗೆ ಸಂಭ್ರಮ ಉದ್ಘಾಟಿಸಿ ಮಾತನಾಡಿ, 6 ಮತ್ತು 7ನೇ ತರಗತಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ವೃತ್ತಿ ಕೌಶಲ ಆಧರಿಸಿ ಚಟುವಟಿಕೆಗಳ ಮೂಲಕ ಶಿಕ್ಷಣ ನೀಡುತ್ತಿರುವುದು ಗ್ರಾಮೀಣ ಮಕ್ಕಳಿಗೆ ಹೆಚ್ಚು ಅನುಕೂಲ ಆಗಲಿದೆ. ಕಲಿಕೋಪಕರಣಗಳನ್ನು ನೀಡುತ್ತಿದ್ದು ಮಕ್ಕಳು ಕೂಡ ಕಾರ್ಯಕ್ರಮದಲ್ಲಿ ತಪ್ಪದೆ ಭಾಗವಹಿಸಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಮಾತನಾಡಿ, ರಾಜ್ಯ ಸರ್ಕಾರ ಮಕ್ಕಳಿಗೆ ಕುಟುಂಬ, ನೀರು, ಆಹಾರ, ಆರೋಗ್ಯ ಮತ್ತು ನೈರ್ಮಲ್ಯ, ಪರಿಸರ ವಿಷಯಗಳ ಮೇಲೆ ಮಾಹಿತಿ ನೀಡಲು ನಿರ್ದೇಶನ ನೀಡಿದೆ.
ಅದಕ್ಕಾಗಿ ಈ ಅವಧಿಯನ್ನು ಸ್ವಲ್ಪ ಓದು, ಸ್ವಲ್ಪ ಮೋಜು ಎಂಬ ವಿಶೇಷ ಕಾರ್ಯಕ್ರಮವಾಗಿ ರೂಪುಗೊಂಡಿದೆ. ತಾಲ್ಲೂಕಿನಲ್ಲಿ 116 ಕೇಂದ್ರಗಳಲ್ಲಿ ಒಟ್ಟು 7835 ಮಕ್ಕಳು ಪ್ರಯೋಜನ ಪಡೆಯಲಿದ್ದಾರೆ ಎಂದು ವಿವರಿಸಿದರು.
ಬೇಸಿಗೆ ರಜೆಗಳಲ್ಲಿ ಮಕ್ಕಳು ಶಾಲೆಗೆ ಬರುವುದಿಲ್ಲ. ಅಂತೆಯೆ ಶಿಕ್ಷಣ ಇಲಾಖೆ ಸ್ಥಳೀಯ ಪ್ರತಿನಿಧಿಗಳ ಹಾಗೂ ಸಂಘ ಸಂಸ್ಥೆಗಳ ಮುಖಂಡ ಸಹಕಾರದೊಂದಿಗೆ ಮನೆ ಮನೆಗೆ ತೆರಳಿ ಮಕ್ಕಳನ್ನು ಸಂಭ್ರಮದಲ್ಲಿ ಭಾಗವಹಿಸಲು ಮನವೊಲಿಸುವ ಕಾರ್ಯ ಮಾಡುತ್ತಿದ್ದಾರೆ. ಏ.17 ರಿಂದ ಆರಂಭಗೊಂಡ ಬೇಸಿಗೆ ಸಂಭ್ರಮ ಮೇ 27 ರ ವರೆಗೆ ನಡೆಯಲಿದೆ. ಈ ಅವಧಿಯಲ್ಲಿ ಮಕ್ಕಳಿಗೆ ಬಿಸಿಯೂಟ ಸೌಲಭ್ಯ ಕಲ್ಪಿಸಲಾಗಿದೆ ಎಂದರು.
ಪುರಸಭೆ ಅಧ್ಯಕ್ಷ ಖಾದರಪಾಷ, ಶಾಲಾ ಸುಧಾರಣ ಸಮಿತಿ ಅಧ್ಯಕ್ಷ ಪ್ರಕಾಶ ಬಾಳೆಗೌಡ್ರ. ಮುಖಂಡ ವೆಂಕನಗೌಡ ಪಾಟೀಲ, ಬಿಆರ್ಪಿ ಶೇಖಪ್ಪ ಇಜೇರಿ, ಸಿಆರ್ಪಿ ಮಂಜುನಾಥ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಕರಡಿ ಇದ್ದರು.