ಶಿರಸಿ: ಕಾಡುಪ್ರಾಣಿಗಳು, ಜಾನುವಾರುಗಳ ಜಲದಾಹ ತಣಿಸಲು ಬಿಸಲಕೊಪ್ಪ ಗ್ರಾಮ ಪಂಚಾಯ್ತಿಯು ಉಲ್ಲಾಳಕೊಪ್ಪದಲ್ಲಿ ನೀರಿನ ತೊಟ್ಟಿಯನ್ನು ನಿರ್ಮಿಸಿದೆ. ನೀರು ತುಂಬಿ ತುಳುಕುವ ತೊಟ್ಟಿಗೆ ಬರುವ ಜಿಂಕೆ, ಕಡವೆ, ಕಾಡುಕುರಿ, ಮಂಗ, ನವಿಲು ಹಾಯಾಗಿ ನೀರು ಕುಡಿದು ಸಂತೃಪ್ತಿಯಿಂದ ಮರಳುತ್ತವೆ.
ಉದ್ಯೋಗ ಖಾತ್ರಿ ಯೋಜನೆಯಲ್ಲಿ ₹ 42,000 ವೆಚ್ಚದಲ್ಲಿ 17X4 ಗಾತ್ರದ ಸಿಮೆಂಟ್ ತೊಟ್ಟಿ ನಿರ್ಮಾಣ ಮಾಡಲಾಗಿದೆ. ಇದರಲ್ಲಿ 3,000 ಲೀಟರ್ ನೀರು ಸಂಗ್ರಹಿಸಬಹುದು. ಇಲ್ಲಿನ ನಿವಾಸಿ ಎಸ್.ಜಿ. ಭಟ್ಟ ಅವರು ಮನೆಯ ಹಿತ್ತಲಿನಲ್ಲಿ ತೆಗೆದಿರುವ ಕೊಳವೆಬಾವಿಯಿಂದ ತೊಟ್ಟಿಗೆ ನೀರು ಪೂರೈಕೆ ಮಾಡುತ್ತಾರೆ.
‘ಸುತ್ತಮುತ್ತಲಿನ ಕೆರೆಗಳೆಲ್ಲ ಒಣಗಿವೆ. ಎಲ್ಲಿಯೂ ಜಾನುವಾರು, ವನ್ಯಪ್ರಾಣಿಗಳಿಗೆ ಕುಡಿಯುವ ನೀರು ಸಿಗುವುದಿಲ್ಲ. ನೀರನ್ನು ಅರಸಿ ಬರುವ ಪ್ರಾಣಿಗಳು ತೊಟ್ಟಿಯ ಬಳಿ ಬಂದು ನೀರು ಕುಡಿದು ಹೋಗುತ್ತವೆ. ಹಗಲು ವೇಳೆಯಲ್ಲೂ ಪ್ರಾಣಿಗಳು ಬರುತ್ತವೆ. ಜಾನುವಾರು ಇದೇ ನೀರನ್ನು ಕುಡಿದು ದಾಹ ಇಂಗಿಸಿಕೊಳ್ಳುತ್ತವೆ. 2–3 ದಿನಕ್ಕೊಮ್ಮೆ ನೀರನ್ನು ತುಂಬಿಸುತ್ತೇನೆ’ ಎನ್ನುತ್ತಾರೆ ಎಸ್.ಜಿ.ಭಟ್ಟ.
ನೀರಿನ ಮೂಲವಿದ್ದರೆ ಪ್ರತಿ ಗ್ರಾಮಕ್ಕೊಂದು ಈ ತರದ ತೊಟ್ಟಿ ನಿರ್ಮಿಸಬಹುದು. ಬಿಸಲಕೊಪ್ಪ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಎಲ್ಲ 13 ಗ್ರಾಮಗಳಲ್ಲಿ ತಲಾ ಒಂದರಂತೆ ತೊಟ್ಟಿ ನಿರ್ಮಿಸಲು ಕ್ರಿಯಾಯೋಜನೆ ರೂಪಿಸಲಾಗಿದೆ. ಇನ್ನು ಒಂದು ವಾರದಲ್ಲಿ ಉಳಿದ ಗ್ರಾಮಗಳಲ್ಲಿ ನೀರಿನ ತೊಟ್ಟಿ ನಿರ್ಮಿಸುವ ಕಾಮಗಾರಿ ಪ್ರಾರಂಭಿಸಲಾಗುವುದು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಮಹಮ್ಮದ್ ರಿಯಾಜ್ ಹೇಳಿದರು.