ಕೆರೂರ: ಅಪ್ಪಟ ಗ್ರಾಮೀಣ ಸೊಗಡಿನ ಹಳ್ಳಿ ಬದುಕು, ಬವಣೆಯನ್ನು ಅನಾವರಣಗೊಳಿಸುವ ಜನಪದ ಕಲಾ ಪ್ರಕಾರಗಳು ಆಧುನಿಕ ಕಾಲ ಘಟ್ಟದಲ್ಲಿ ಅವಸಾನದ ಅಂಚಿನಲ್ಲಿವೆ. ಅವುಗಳ ಸಂರಕ್ಷಣೆಗೆ ಸಮಾಜದಲ್ಲಿ ಜಾಗೃತಿ, ಅಭಿರುಚಿ ರೂಢಿಸಬೇಕು ಎಂದು ಚರಂತಿಮಠದ ಡಾ.ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಚಿನಗುಂಡಿ ಪ್ಲಾಟ್ನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ದುರ್ಗಾ ಪರಮೇಶ್ವರಿ ಪರಿಶಿಷ್ಟ ಜಾತಿ ಮತ್ತು ಗ್ರಾಮಿಣಾಭಿವೃದ್ಧಿ ಸಾಂಸ್ಕೃತಿಕ ಸಂಘವು ಏರ್ಪಡಿಸಿದ್ದ ಜಾನಪದ ಸಂಭ್ರಮ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.ಜಾನಪದ ಕಲೆಗಳನ್ನೇ ನಂಬಿರುವ ಅನೇಕ ಗ್ರಾಮೀಣ ಭಾಗದ ಬಡ ಕಲಾವಿದರ ಕಾಯಕಲ್ಪಕ್ಕೆ ಸರ್ಕಾರ ಇನ್ನಷ್ಟು ಪ್ರೋತ್ಸಾಹಕರ ಯೋಜನೆಗಳನ್ನು ಜಾರಿಗೊಳಿಸಿ ಜನಪದ ಕಲೆಗಳ ಪರಂಪರೆ ಮುಂದುವರಿಕೆಗೆ ಪ್ರಾಮುಖ್ಯತೆ ನೀಡುವಂತೆ ಕರೆ ನೀಡಿದರು.
ಹುಬ್ಬಳ್ಳಿ ಕಿಮ್ಸ್ನ ಮಾಜಿ ನಿರ್ದೇಶಕ ಡಾ.ಬಿ.ಎಸ್. ಮದಕಟ್ಟಿ, ಸಮಾಜದ ಸತ್ಕಾರ ಪಡೆದು ಮಾತನಾಡಿ, ಈ ನನ್ನ ಹುಟ್ಟೂರು, ನಮ್ಮ ಬಡಾವಣೆಯ ಜನತೆ, ಅಂದು ತಾಯಿಯನ್ನು ಕಳೆದುಕೊಂಡು ತಬ್ಬಲಿ ಆಗಿದ್ದ ನನ್ನನ್ನು ಪ್ರೀತಿ, ವಿಶ್ವಾಸದಿಂದ ಬೆಳೆಸಿರುವ ಋಣವನ್ನು ತೀರಿಸಲು ಎಂದಿಗೂ ಸಾಧ್ಯವಿಲ್ಲ. ನಮ್ಮ ತಂದೆ ಬಡತನದ ಬೇಗೆಯಲ್ಲೂ ಉತ್ತಮ ಶಿಕ್ಷಣ ಕೊಡಿಸಿದ್ದರಿಂದ ವೈದ್ಯಕೀಯ ರಂಗದಲ್ಲಿ ಉನ್ನತ ಸಾಧನೆ ಸಾಧ್ಯವಾಯಿತು ಎಂದರು.
ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಮಹಾಂತೇಶ ಮಮದಾಪೂರ ಮಾತನಾಡಿದರು. ಮೋಚಿ ಸಮಾಜದ ಧುರೀಣ ಫಕೀರಪ್ಪ ಮತ್ತಿಕಟ್ಟಿ ಅಧ್ಯಕ್ಷತೆ ವಹಿಸಿದ್ದರು. ಗಣ್ಯ ವರ್ತಕ ಮಲ್ಲಪ್ಪಜ್ಜ ಘಟ್ಟದ ಹಾಗೂ ಡಾ.ಬಿ.ಎಸ್. ಮಶ್ಯಾಳ, ಡಾ.ಬಿ.ಬಿ. ಬೇಲೂರ, ಕುಶಾಲಪ್ಪ ಸಣ್ಣಕ್ಕಿ, ಕೃಷ್ಣಾ ಭಜಂತ್ರಿ ಅವರನ್ನು ಸನ್ಮಾನಿಸಲಾಯಿತು.
ಕಾವ್ಯಾ ಶಿವಾನಂದ ಮತ್ತಿಕಟ್ಟಿ ಅವರ ಭರತನಾಟ್ಯ ಪ್ರದರ್ಶನ, ಜಾನಪದ ಕಲಾ ತಂಡಗಳ ಗಾಯನ ನೆರೆದ ಸಭಿಕರನ್ನು ರಂಜಿಸಿದವು. ಮಹಾಂತೇಶ ಮೆಣಸಗಿ, ಎಂ.ಕೆ. ವಿಠ್ಠಪ್ಪನವರ, ಎಂ.ಎಫ್. ಕುರಿ,ಕೃಷ್ಣಾ ಪೂಜಾರಿ, ಎನ್. ಎಲ್. ರಾಠೋಡ, ಶಿವಾನಂದ ಮಾಲಗಿತ್ತಿ, ಎನ್.ಬಿ. ಬಾಗೇವಾಡಿ,ಸಿ.ಎಸ್. ನಾಗನೂರ, ಎಸ್.ಆರ್. ಮತ್ತಿಕ ಟ್ಟಿ, ಪರಸಪ್ಪ ಮತ್ತಿಕಟ್ಟಿ, ಮಾರುತಿ ಬೋಳೆ, ಜಗದೀಶ ಯಂಡಿಗೇರಿ, ರವಿ ಮತ್ತಿಕಟ್ಟಿ, ಲಾಲಸಾಬ್ ಬಡೇಖಾನ, ಬಸವಂತಪ್ಪ ಮತ್ತಿಕಟ್ಟಿ ಮುಂತಾದವರು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.