ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರಲಕ್ಷ್ಮೀ ಚಿತ್ರದ ಪ್ರಚಾರ ತಂತ್ರಕ್ಕೆ ನೆಟ್ಟಿಗರ ಆಕ್ರೋಶ

Last Updated 19 ಏಪ್ರಿಲ್ 2017, 12:08 IST
ಅಕ್ಷರ ಗಾತ್ರ

ಚೆನ್ನೈ: ಚಿತ್ರರಂಗದಲ್ಲಿನ ನಟಿಯರ ಮೇಲೆ ನಡೆಯುತ್ತಿರುವ ಲೈಂಗಿಕ ಶೋಷಣೆ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯದ ಬಗ್ಗೆ ದನಿ ಎತ್ತಿ ಸುದ್ದಿಯಲ್ಲಿದ್ದ ತಮಿಳು ಚಿತ್ರ ನಟಿ ವರಲಕ್ಷ್ಮೀ ಶರತ್‌ ಕುಮಾರ್‌ ಈಗ ತಮ್ಮ ಮುಂಬರುವ ಚಿತ್ರದ ಪ್ರಚಾರ ತಂತ್ರದ ವಿಷಯದಲ್ಲಿ ಪೇಚಿಗೆ ಸಿಲುಕಿದ್ದಾರೆ.

ವರಲಕ್ಷ್ಮೀ ಅವರನ್ನು ಮಂಚಕ್ಕೆ ಕಟ್ಟಿ ಹಾಕಿ ಅವರ ಬಾಯಿಗೆ ಬಟ್ಟೆ ತುರುಕಿರುವ ಚಿತ್ರವನ್ನು ವರಲಕ್ಷ್ಮೀ ಅಪಹರಣಗೊಂಡಿದ್ದಾರೆ (#VaralaxmiGotKidnapped) ಎಂಬ ಹ್ಯಾಷ್‌ಟ್ಯಾಗ್‌ ಜತೆಗೆ ಟ್ವೀಟ್‌ ಮಾಡಲಾಗಿತ್ತು.

ವರಲಕ್ಷ್ಮೀ ಅವರ ಮುಂಬರಲಿರುವ ಚಿತ್ರ ‘ಎಚರಿಕೈ’ ಪ್ರಚಾರ ವಿಭಾಗದ ಸಿಬ್ಬಂದಿ ಮಂಗಳವಾರ ಈ ಟ್ವೀಟ್‌ ಮಾಡಿದ್ದರು. ಈ ಟ್ವೀಟ್‌ ನೋಡಿದ ಹಲವರು ನಿಜವಾಗಿಯೂ ವರಲಕ್ಷ್ಮೀ ಅವರನ್ನು ಅಪಹರಿಸಲಾಗಿದೆ ಎಂದು ಭಾವಿಸಿದ್ದರು.

ಈ ಟ್ವೀಟ್‌ ಕಂಡು ಗಾಬರಿಯಾಗಿದ್ದ ಹಲವು ಅಭಿಮಾನಿಗಳು ವರಲಕ್ಷ್ಮೀ ಅವರಿಗೆ ನೇರವಾಗಿ ಟ್ವೀಟ್‌ ಮಾಡಿ, ‘ಈ ಸುದ್ದಿ ನಿಜವೇ?’ ಎಂದು ಕೇಳಿದ್ದರು.

ಅಭಿಮಾನಿಗಳ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದ ವರಲಕ್ಷ್ಮೀ, ‘ನಾನು ಕ್ಷೇಮವಾಗಿದ್ದೇನೆ. ನಿಮ್ಮ ಕಾಳಜಿಗೆ ಧನ್ಯವಾದ. ಇದು ನಮ್ಮ ಮುಂದಿನ ಚಿತ್ರದ ಪ್ರಚಾರದ ಒಂದು ಭಾಗ’ ಎಂದು ಟ್ವೀಟ್‌ ಮಾಡಿದ್ದರು.

‘ಈ ಪ್ರಚಾರದ ಬಗ್ಗೆ ನನಗೆ ಮಾಹಿತಿ ಇರಲಿಲ್ಲ. ಕಾನೂನು ಇಲಾಖೆಗೆ ಮನವಿ ಸಲ್ಲಿಸಲು ಸೇವ್‌ ಶಕ್ತಿ ಅಭಿಯಾನದ ಪ್ರತಿನಿಧಿಯಾಗಿ ದೆಹಲಿಗೆ ಬಂದಿದ್ದೇನೆ. ತೊಂದರೆಗಾಗಿ ಕ್ಷಮಿಸಿ’ ಎಂದು ಮತ್ತೊಂದು ಟ್ವೀಟ್‌ನಲ್ಲಿ ವರಲಕ್ಷ್ಮೀ ಹೇಳಿದ್ದರು.

ಅದುವರೆಗೂ ವರಲಕ್ಷ್ಮೀ ಅಪಹರಣಗೊಂಡಿರಬಹುದೆಂದು ಭಾವಿಸಿದ್ದ ಹಲವರು ಈ ರೀತಿಯ ಚಿತ್ರದ ಪ್ರಚಾರ ತಂತ್ರದ ವಿರುದ್ಧ ಅಸಮಾಧಾನದ ಟ್ವೀಟ್‌ಗಳನ್ನು ಹರಿಸಲು ಮುಂದಾದರು. ಕೆಲವರು ಕಟು ಮಾತುಗಳಿಂದ ಚಿತ್ರ ತಂಡ ಹಾಗೂ ವರಲಕ್ಷ್ಮೀ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಇದೊಂದು ಕೀಳು ಮಟ್ಟದ ಪ್ರಚಾರ ತಂತ್ರ. ಈ ರೀತಿಯ ಪ್ರಚಾರ ತಂತ್ರ ನಿಮಗೆ ಅಗತ್ಯವಿರಲಿಲ್ಲ’ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಈ ರೀತಿಯ ಪ್ರಚಾರ ತಂತ್ರಕ್ಕೆ ಮುಂದಾಗಿರುವ ಚಿತ್ರವನ್ನು ನಾನು ಬಹಿಷ್ಕರಿಸುತ್ತೇನೆ’ ಎಂದು ಕೆಲವರು ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT