ರಾಯಚೂರು: ‘ಉಪ ಚುನಾವಣೆಯಲ್ಲಿ ಬಿಜೆಪಿ ಸೋತಿರುವುದಕ್ಕೆ ಯಡಿಯೂರಪ್ಪ ಅವರು ಕಾರಣರಲ್ಲ. ಕೆಲವರು ಅಸೂಯೆಯಿಂದ ಯಡಿಯೂರಪ್ಪ ವಿರುದ್ಧ ಹೇಳಿದ್ದಾರೆ. ಚುನಾವಣೆಯಲ್ಲಿ ಹಣದಿಂದ ಸೋತಿದ್ದೇವೆ. ಆದರೆ ಜನರಿಂದ ಸೋತಿಲ್ಲ’ ಎಂದು ಸಂಸದ ಬಿ.ಶ್ರೀರಾಮುಲು ಹೇಳಿದರು.ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಉಪ ಚುನಾವಣೆಯಲ್ಲಿ ಬಿಜೆಪಿಗೆ ಶೇ 43 ರಷ್ಟು ಮತಗಳು ಬಂದಿವೆ. ಇದಕ್ಕೂ ಮೊದಲು ಅದೇ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದಿದ್ದ ಯಾವ ಚುನಾವಣೆಯಲ್ಲೂ ಇಷ್ಟೊಂದು ಜನ ಬೆಂಬಲ ಸಿಕ್ಕಿರಲಿಲ್ಲ. ಕಾಂಗ್ರೆಸ್ ಸರ್ಕಾರದ ಆಡಳಿತ ಯಂತ್ರವನ್ನು ದುರುಪಯೋಗ ಮಾಡಿಕೊಂಡು ಗೆಲುವು ಸಾಧಿಸಿದೆ. 2018ರಲ್ಲಿ ನಡೆಯುವ ಚುನಾವಣೆ ಮೇಲೆ ಇದರಿಂದ ಯಾವುದೇ ಪರಿಣಾಮ ಆಗುವುದಿಲ್ಲ’ ಎಂದು ಹೇಳಿದರು.