ಮೂಡಿಗೆರೆ: ‘ತಾಲ್ಲೂಕಿಗೆ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಲು ಹೆಚ್ಚುವರಿಯಾಗಿ ಎರಡು ಮೆಗಾವ್ಯಾಟ್ ವಿದ್ಯುತ್ಗೆ ಬೇಡಿಕೆ ಸಲ್ಲಿಸುವಂತೆ’ ಶಾಸಕ ಬಿ.ಬಿ.ನಿಂಗಯ್ಯ ಸೂಚಿಸಿದರು.ಪಟ್ಟಣದ ಮೆಸ್ಕಾಂ ಕಚೇರಿಯಲ್ಲಿ ಬುಧವಾರ ಸಭೆ ನಡೆಸಿದ ಅವರು, ‘ರಾಜ್ಯದ ನೀರಾವರಿ ಹಾಗೂ ವಿದ್ಯುತ್ ಉತ್ಪಾದನೆಗೆ ಮಲೆನಾಡಿನ ಕೊಡುಗೆ ಅಪಾರವಾಗಿದೆ. ಆದರೆ ಮಲೆನಾಡಿ ನಲ್ಲಿಯೇ ಜನರು ಹೆಚ್ಚು ವಿದ್ಯುತ್ ಸಮಸ್ಯೆ ಅನುಭವಿಸುವಂತಾಗಿದೆ. ವಿದ್ಯುತ್ಖಾತೆ ಸಚಿವರು ಲೋಡ್ ಶೆಡ್ಡಿಂಗ್ ಇಲ್ಲ ಎನ್ನುತ್ತಾರೆ, ಆದರೆ ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಈಗಲೂ ನಿರಂತರವಾಗಿ ಲೋಡ್ ಶೆಡ್ಡಿಂಗ್ ನಡೆಸಲಾಗುತ್ತಿದೆ ಏಕೆ?’ ಎಂದು ಪ್ರಶ್ನಿಸಿದರು.
‘ಮಲೆನಾಡನಲ್ಲಿ ಕೇವಲ ಫೆಬ್ರುವರಿ ಹಾಗೂ ಮಾರ್ಚ್ ತಿಂಗಳಿನಲ್ಲಿ ಮಾತ್ರ ರೈತರು ಕೃಷಿಗೆ ವಿದ್ಯುತ್ ಬಳಸುತ್ತಾರೆ. ಆದರೆ ಈ ಅವಧಿಯಲ್ಲಿಯೇ ಗುಣ ಮಟ್ಟದ ವಿದ್ಯುತ್ ನೀಡದಿದ್ದರೆ ರೈತರಿಗೆ ವಿದ್ಯುತ್ ಉಪಯೋಗವೇ ಇಲ್ಲದಂತಾಗಿದೆ’ ಎಂದರು.‘ಅಗತ್ಯ ಪ್ರಮಾಣಕ್ಕಿಂತ ಕಡಿಮೆ ಪ್ರಮಾಣದಲ್ಲಿ ವಿದ್ಯುತ್ ಪೂರೈಕೆ ಯಾಗುತ್ತಿರುವುದರಿಂದ ಲೋಡ್ ಶೆಡ್ಡಿಂಗ್ ಅನಿವಾರ್ಯವಾಗಿದೆ ಎಂದು ಮೆಸ್ಕಾಂ ಅಧಿಕಾರಿಗಳು ಉತ್ತರಿಸಿದ್ದರಿಂದ, ತಾಲ್ಲೂಕಿಗೆ ಎರಡು ಮೆಗಾವ್ಯಾಟ್ ಹೆಚ್ಚುವರಿ ವಿದ್ಯುತ್ಗೆ ಬೇಡಿಕೆ ಸಲ್ಲಿಸಿ’ ಎಂದು ಸೂಚಿಸಿದರು.
‘ಪಟ್ಟಣದಿಂದ ಆರು ಮಾರ್ಗಗಳಿಗೆ ವಿದ್ಯುತ್ ಪೂರೈಸಬೇಕಾಗಿರು ವುದರಿಂದ, ಅಗತ್ಯಕ್ಕಿಂತ ಹೆಚ್ಚು ಲೋಡ್ ಅವಲಂಬಿಸುತ್ತದೆ. ಇದರಿಂದ ಗ್ರಾಮೀಣ ಪ್ರದೇಶಗಳಿಗೆ ಗುಣಮಟ್ಟದ ವಿದ್ಯುತ್ ನೀಡಲು ಸಾಧ್ಯವಾಗುತ್ತಿಲ್ಲ’ ಎಂದು ಅಧಿಕಾರಿಗಳು ತಿಳಿಸಿದರು. ಇದಕ್ಕೆ ಉತ್ತರಿಸಿದ ಶಾಸಕರು ಜನ್ನಾ ಪುರದಲ್ಲಿ ಉಪ ವಿದ್ಯುತ್ ವಿತರಣಾ ಕೇಂದ್ರವನ್ನು ಸ್ಥಾಪಿಸಲು ಕ್ರಮ ಕೈಗೊಳ್ಳ ಬೇಕು. ಬಣಕಲ್ ಉಪ ವಿದ್ಯುತ್ ವಿತರಣಾ ಕೇಂದ್ರದಿಂದ ಗುಣಮಟ್ಟದ ವಿದ್ಯುತ್ ಪೂರೈಕೆಯಾಗುವಂತೆ ಕಾರ್ಯ ನಿರ್ವಹಿಸಬೇಕು. ಮಲೆನಾಡಿನ ಕಾಫಿ ತೋಟಗಳಲ್ಲಿ ಹಾದು ಹೋಗಿರುವ ಮಾರ್ಗಗಳನ್ನು ಬೇಸಿಗೆಯಲ್ಲಿಯೇ ಜಂಗಲ್ ತೆರವುಗೊಳಿಸಿ, ಮಳೆಗಾಲದಲ್ಲಿ ಸಮಸ್ಯೆ ಉಂಟಾಗದಂತೆ ಕ್ರಮ ಕೈಗೊಳ್ಳಬೇಕು. ಕುಡಿಯುವ ನೀರಿನ ಯೋಜನೆಗಳಿಗೆ ಶೀಘ್ರವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕು’ ಎಂದರು.
ಮೆಸ್ಕಾಂ ಎಂಜಿನಿಯರ್ ರಾಜ ಶೇಖರ್ ಮಾತನಾಡಿ, ‘ತಾಲ್ಲೂಕಿನ ಕಳಸ, ಕುದುರೆಮುಖ, ಸಂಸೆ ಭಾಗಗಳಿಗೆ ಬಾಳೆಹೊನ್ನೂರು ಉಪ ವಿದ್ಯುತ್ ವಿತರಣಾ ಕೇಂದ್ರದಿಂದ ವಿದ್ಯುತ್ ಪೂರೈಕೆಯಾಗುತ್ತಿದ್ದು, ಈ ಮಾರ್ಗವನ್ನು 1976ರಲ್ಲಿ ಸ್ಥಾಪಿಸಿರುವುರಿಂದ ಮಾರ್ಗದ ವಾಹಕ ಬದಲಾವಣೆ ಅಗತ್ಯವಾಗಿದ್ದು, ಈಗಾಗಲೇ ವಾಹಕ ಬದಲಾವಣೆಗೆ ಪೂರಕ ಕಾರ್ಯಗಳು ನಡೆದಿದ್ದು, ಟೆಂಡರ್ ಪ್ರಕ್ರಿಯೆ ನಡೆಯಬೇಕಿದೆ’ ಎಂದರು. ಜಿಲ್ಲಾ ಪಂಚಾಯಿತಿ ನಾಮನಿರ್ದೇಶಿತ ಸದಸ್ಯ ಕೆ. ಮಂ ಚೇಗೌಡ, ರವಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.