ಶಿರಸಿ: ನಗರಸಭೆಯ ನಾಲ್ವರು ಪೌರ ಕಾರ್ಮಿಕರು ಸಿಂಗಾಪುರ ಪ್ರವಾಸಕ್ಕೆ ಹೋಗಲು ಅಣಿಯಾಗಿದ್ದಾರೆ. ವಿಮಾನ ಹತ್ತಿ ವಿದೇಶಕ್ಕೆ ಹೋಗುವ ಕನಸು ಕಾಣುತ್ತಿರುವ ಅವರು ಸರ್ಕಾರ ಪ್ರವಾಸದ ದಿನಾಂಕ ಘೋಷಣೆ ಮಾಡುವುದನ್ನೇ ಕಾಯುತ್ತಿದ್ದಾರೆ.ಘನತ್ಯಾಜ್ಯ ವಿಲೇವಾರಿ, ನಗರ ನೈರ್ಮಲ್ಯೀಕರಣ ಅಧ್ಯಯನಕ್ಕಾಗಿ ರಾಜ್ಯ ಸರ್ಕಾರವು ಕರ್ನಾಟಕ ಪರಿಶಿಷ್ಟ ಜಾತಿ ಉಪ ಯೋಜನೆ (ಎಸ್ಸಿಪಿ) ಹಾಗೂ ಪರಿಶಿಷ್ಟ ಪಂಗಡ ಉಪ ಯೋಜನೆ (ಟಿಎಸ್ಪಿ) ಅಡಿಯಲ್ಲಿ ರಾಜ್ಯದಲ್ಲಿರುವ ಮಹಾನಗರ ಪಾಲಿಕೆ, ನಗರಸಭೆ, ಪಟ್ಟಣ ಪಂಚಾಯ್ತಿ, ಪುರಸಭೆಗಳ ಆಯ್ದ ಪೌರಕಾರ್ಮಿಕರನ್ನು ವಿದೇಶ ಪ್ರವಾಸಕ್ಕೆ ಕರೆದೊಯ್ಯಲು ಮುಂದಾಗಿದೆ. ರಾಜ್ಯದಿಂದ ಪ್ರವಾಸ ಹೊರಟಿರುವ ಒಟ್ಟು 802 ಪೌರ ಕಾರ್ಮಿಕರಲ್ಲಿ ಶಿರಸಿಯ ಹಿರಿಯ ಪೌರ ಕಾರ್ಮಿಕರಾದ ಅಣ್ಣಪ್ಪ ಶಂಕರ ರಾಜಾ, ಮಾಸ್ತಿ ರಾಮಾ ಭಂಗಿ, ದಿನೇಶ ನಾಣು ಹರಿಜನ, ಚಂದ್ರಕಾಂತ ಗುಡೇಅಂಗಡಿ ಸೇರಿದ್ದಾರೆ.