ಕನಕಗಿರಿ: ‘ದಲಿತರು ಸಾಗುವಳಿ ಮಾಡುತ್ತಿದ್ದ 96 ಎಕರೆ ಭೂಮಿಯನ್ನು ನಕಲಿ ದಾಖಲೆ ಸೃಷ್ಟಿಸಿ ವಂಚನೆ ಮಾಡಿರುವ ಕಂದಾಯ ಅಧಿಕಾರಿಯನ್ನು ಬಂಧಿಸಬೇಕು. ಕಾನೂನು ಬಾಹಿರವಾಗಿ ಭೂಮಿ ಖರೀದಿಸಿದ ಪ್ರಕರಣದ ನ್ಯಾಯಾಂಗ ತನಿಖೆಗೆ ಒತ್ತಾಯಿಸಿ ವಿವಿಧ ದಲಿತ ಸಂಘಟನೆಗಳಿಂದ ಏ.24ರಂದು ಭೂವಶಕ್ಕೆ ಪಡೆಯಲು ಚಳವಳಿ ಆಯೋಜಿಸಲಾಗಿದೆ’ ಎಂದು ದಲಿತ ಮುಖಂಡ ಪಂಪಾಪತಿ ಜಾಲಿಹಾಳ ತಿಳಿಸಿದರು.
ಇಲ್ಲಿ ತಿಪ್ಪನಾಳ ಕೆರೆ ಭೂಮಿ ಅತಿಕ್ರಮಣ ಕುರಿತು ಶುಕ್ರವಾರ ನಡೆದ ಸಾಗುವಳಿದಾರರ ಸಭೆಯಲ್ಲಿ ಅವರು ಮಾತನಾಡಿ, ‘ಭೂಮಾಲೀಕ ಪೊಲೀಸ್ ಪಾಟೀಲ ಕುಟುಂಬ ಭೂಮಿಯನ್ನು ವಶಕ್ಕೆ ಪಡೆದು ಸೋಲಾರ್ ಕಂಪೆನಿಯವರಿಗೆ ಮಾರಾಟ ಮಾಡಿ ದಲಿತರನ್ನು ಒಕ್ಕಲೆಬ್ಬಿಸಿದ್ದಾರೆ’ ಎಂದು ದೂರಿದರು.
‘ಶಾಂತಿಯುತವಾಗಿ ಹೋರಾಟ ನಡೆಸುತ್ತಿದ್ದ ದಲಿತರ ಮೇಲೆ ಗ್ರಾಮೀಣ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ದೀಪಕ ಭೂಸರೆಡ್ಡಿ ದೌರ್ಜನ್ಯ ಮಾಡಿದ್ದು, ಠಾಣೆಯಲ್ಲಿ ಕೂಡಿ ಹಾಕಿ ಹಿಂಸೆ ನೀಡಿದ್ದಾರೆ’ ಎಂದು ಆರೋಪಿಸಿದರು.
ಪ್ರಗತಿಪರ ಸಂಘಟನೆ ಮುಖಂಡ ಹೇಮಂತರಾಜ ಮಾತನಾಡಿ, ‘ತಿಪ್ಪನಾಳ ಕೆರೆಯ 96 ಎಕರೆ ಪ್ರದೇಶ ದಲಿತ ಕುಟುಂಬಗಳಿಗೆ ಸೇರಿದೆ. ಅದನ್ನು ಖರೀದಿಸಿರುವ ಸೋಲಾರ್ ಕಂಪೆನಿಯ ಕಾನೂನು ಸಲಹೆಗಾರ ರಾಮನಗೌಡ ಹನುಮಸಾಗರ ಅವರು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ ಸಂಬಂಧಿಯಾಗಿದ್ದಾರೆ. ಶಾಸಕ ಶಿವರಾಜ ತಂಗಡಗಿ ಬೆಂಬಲಿಗರು ರಾಮನಗೌಡ ಅವರಿಗೆ ಬೆಂಬಲವಾಗಿ ನಿಂತಿದ್ದಾರೆ’ ಎಂದು ಆರೋಪಿಸಿದರು.
‘ಕನಕಗಿರಿ ಅಂಬೇಡ್ಕರ್ ವೃತ್ತದಿಂದ ಕೆರೆಯ ಭೂಮಿವರೆಗೆ ಮೆರವಣಿಗೆ ನಡೆಸಲಾಗುವುದು’ ಎಂದರು. ಪ್ರಮುಖರಾದ ಹನುಮಂತಪ್ಪ ಬಸರಿಗಿಡದ, ಸಣ್ಣ ನಾಗೇಶ, ನೀಲಕಂಠ ಬಡಿಗೇರ, ವೆಂಕಟೇಶ ನೀರ್ಲೂಟಿ, ಹೊನ್ನುರುಸಾಬ ಕಳ್ಳಿಮನಿ, ದುರಗಪ್ಪ ಬೈಲಕ್ಕುಂಪುರ ಇದ್ದರು.