ಚಿಕ್ಕಮಗಳೂರು: ‘ಜಿಲ್ಲೆ ದಿನೇ ದಿನೇ ಕುಖ್ಯಾತಿ ಪಡೆಯುತ್ತಿದೆ. ಜೂಜು ಅಡ್ಡೆ ಯಾಗಿ ಮಾರ್ಪಟ್ಟಿದೆ. ಜಿಲ್ಲೆಯಲ್ಲಿ ರಾಜ ಕಾರಣಿಗಳು ಮತೀಯ ವೇಷ ಹಾಕಿಕೊಂಡಿದ್ದಾರೆ’ ಎಂದು ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ ಎಂದು ದೂರಿದರು.
ಸುಮಾರು 24 ಸಂಘಟನೆಗಳು ಒಟ್ಟುಗೂಡಿರುವ ‘ಜನ ಪರ್ಯಾಯ ಕಟ್ಟೋಣ ಜಾಥಾ’ ಶುಕ್ರವಾರ ನಗರ ಪ್ರವೇಶಿಸಿದಾಗ, ಆಜಾದ್ ಪಾರ್ಕ್ ವೃತ್ತದಲ್ಲಿ ಸಂಘಟನೆ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.
‘ಇಂದು ಅಧಿಕಾರ ಅನುಭವಿಸುತ್ತಿರುವ ಜಿಲ್ಲೆಯ ಪ್ರಮುಖ ರಾಜಕಾರಣಿ 7–8 ವರ್ಷಗಳ ಹಿಂದೆ ಬೇರೆ ಪಕ್ಷಕ್ಕೆ ಹೋಗಲು ಸಿದ್ಧರಾಗಿದ್ದರು. ಈಗ ಶಾಸಕರಾಗಿರುವ ಅವರು ಪಕ್ಷ ಅಧಿಕಾರದಲ್ಲಿ ದ್ದಾಗ ಸಚಿವ ಸ್ಥಾನ ಕೂಡ ಅಲಂಕರಿಸಿದ್ದರು.
ಅವರು ಸಚಿವರಾಗಿದ್ದಾಗಲೂ ತಾಲ್ಲೂಕು ಕಚೇರಿ ಕಟ್ಟಡ ಮಾತ್ರ ಅವರ ಮನೆಯಂತೆ ಶೀಘ್ರ ನಿರ್ಮಾಣವಾಗಲಿಲ್ಲ’ ಎಂದು ಶಾಸಕ ಸಿ.ಟಿ.ರವಿ ಹೆಸರು ಪ್ರಸ್ತಾ ಪಿಸದೆ ಪರೋಕ್ಷ ವಾಗ್ದಾಳಿ ನಡೆಸಿದರು.
‘ಜಾಥಾ ಆರಂಭವಾಗಿ 5 ದಿನ ಕಳೆದಿವೆ. ಜನಾಂದೋಲನಗಳ ಮಹಾ ಮೈತ್ರಿ ರಾಜಕೀಯ ಪಕ್ಷವಲ್ಲ. ಜನತೆಗೆ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷಗಳ ಸ್ವಾರ್ಥ ರಾಜಕಾರಣದ ವಿರುದ್ಧ ಅರಿವು ಮೂಡಿಸುವುದಾಗಿದೆ. ಜನ ಪರ್ಯಾಯ ಕಟ್ಟೋಣ ಜಾಥಾಕ್ಕೆ ರಾಜ್ಯದ 24 ಸಂಘಟನೆಗಳು ಬೆಂಬಲ ವ್ಯಕ್ತ ಪಡಿಸಿವೆ’ ಎಂದರು.
ಕರ್ನಾಟಕ ಜನಶಕ್ತಿ ಸಂಘದ ಮಲ್ಲಿಗೆ ಮಾತನಾಡಿ, ‘ಜನ ಪರ್ಯಾಯ ಕಟ್ಟೋಣ ಜಾಥಾ ಒಂದು ಪರ್ಯಾಯ ರಾಜಕೀಯ ಚಳವಳಿಯಾಗಿದೆ. ಸಮಾಜ ದಲ್ಲಿ ಬದಲಾವಣೆಯನ್ನು ಯಾವುದೇ ಸರ್ಕಾರ ಅಥವಾ ರಾಜಕೀಯ ಪಕ್ಷ ತರುವುದಿಲ್ಲ.
ರೈತರು, ವಿದ್ಯಾರ್ಥಿಗಳ ಹೋರಾಟದಿಂದ ಬದಲಾವಣೆಗಳು ಆಗುತ್ತಿವೆ. ಪಕ್ಷಗಳಿಂದ ಜನಪರ ಯೋಜನೆಗಳನ್ನು ನಿರೀಕ್ಷಿಸುವುದೇ ತಪ್ಪು. ಇದುವರೆಗೂ ಯಾವುದೇ ಪಕ್ಷ ಜನರು ಬಯಸಿದ ನೀತಿ ಜಾರಿಗೆ ತಂದಿಲ್ಲ’ ಎಂದರು.
ಮಂಡ್ಯದಲ್ಲಿ ಆರಂಭವಾದ ಜಾಥಾ ತುಮಕೂರು ಮಾರ್ಗವಾಗಿ ಜಿಲ್ಲೆ ಪ್ರವೇಶಿಸಿತು. ನಗರದ ತಾಲ್ಲೂಕು ಕಚೇರಿಯಿಂದ ಹನುಮಂತಪ್ಪ ವೃತ್ತದ ಮೂಲಕ ಎಂ.ಜಿ.ರಸ್ತೆ ಮಾರ್ಗವಾಗಿ ಮೆರವಣಿಗೆ ನಡೆಯಿತು.
ವಿವಿಧ ಸಂಘಟನೆ ಮುಖಂಡರಾದ ಚಂದ್ರಶೇಖರ್ ಮೇಟಿ, ಗೌಸ್ ಮೊಹಿ ಯುದ್ದೀನ್, ಮಂಜುನಾಥಗೌಡ, ಕೆ.ಟಿ.ರಾಮಸ್ವಾಮಿ, ಕೆ.ಪಿ.ರಾಜರತ್ನಂ ಮತ್ತಿತರರು ಇದ್ದರು.