ಬಳ್ಳಾರಿ: ಕಪ್ಪು ಹಣ ಬಿಳಿ ಮಾಡಿದ ಆರೋಪಕ್ಕೆ ಸಿಲುಕಿರುವ ಮಾಜಿ ಅಧಿಕಾರಿ ಭೀಮಾನಾಯ್ಕ ಅವರ ಸಹೋದರನದ್ದು ಎನ್ನಲಾದ ₹ 17 ಲಕ್ಷ ಮೌಲ್ಯದ ಆಭರಣಗಳ ದರೋಡೆ ಪ್ರಕರಣದ ಆರೋಪಿಯನ್ನು ಪೊಲೀಸರು ಸಂಡೂರಿನಲ್ಲಿ ಗುರುವಾರ ಬಂಧಿಸಿದ್ದಾರೆ.
ಸಂಡೂರಿನ ಸುಶೀಲಾ ನಗರದ ನಿವಾಸಿ ಕೀರೂನಾಯ್ಕ ಬಂಧಿತ ಆರೋಪಿ. ಆತನಿಂದ 132.700 ಗ್ರಾಂ ತೂಕದ ಒಟ್ಟು ₹ 15.90 ಲಕ್ಷ ಮೌಲ್ಯದ ಆಭರಣ ವಶಪಡಿಸಿಕೊಂಡಿದ್ದಾರೆ.
ನಾಲ್ಕು ತಿಂಗಳಾಗಿತ್ತು: ‘ಸಂಡೂರು ತಾಲ್ಲೂಕಿನ ಸುಶೀಲಾನಗರದಲ್ಲಿ ಕಳೆದ ಜನವರಿ 3ರಂದು ಜ್ಯೋತಿಬಾಯಿ ಎಂಬುವವರ ಮನೆಗೆ ಏಳು ಜನರೊಂದಿಗೆ ನುಗ್ಗಿದ್ದ ಆರೋಪಿಯು ಮಹಿಳೆಗೆ ಜೀವ ಬೆದರಿಕೆ ಹಾಕಿ, ಮನೆಯಲ್ಲಿದ್ದ ಸುಮಾರು ಆಭರಣಗಳನ್ನು ದೋಚಿ ತಲೆ ಮರೆಸಿಕೊಂಡಿದ್ದ.
ಸಂಡೂರಿನ ಸ್ಮಯೊರ್ ಕಾಲೊನಿಯ ಮನೆಯಲ್ಲಿದ್ದ ಆತನನ್ನು ಗುರುವಾರ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪು ಒಪ್ಪಿಕೊಂಡ ’ ಎಂದು ಜಿಲ್ಲಾ ಅಪರಾಧ ಪತ್ತೆದಳದ ಇನ್ಸ್ಪೆಕ್ಟರ್ ಹಸನ್ಸಾಬ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಕಳುವಾಗಿದ್ದ ಸುಮಾರು ₹1 ಲಕ್ಷ ಮೌಲ್ಯದ ವಜ್ರದ ಉಂಗುರ ಇನ್ನೂ ಪತ್ತೆಯಾಗಿಲ್ಲ. ಉಳಿದ ಆರೋಪಿಗಳ ಪತ್ತೆಗೆ ತನಿಖೆ ಮುಂದುವರಿದಿದೆ’ ಎಂದರು.
ಯಾರ ಆಭರಣ?: ದರೋಡೆ ನಡೆದ ಸಂದರ್ಭದಲ್ಲಿ, ಆಭರಣಗಳು ಭೀಮಾನಾಯ್ಕ ಅವರಿಗೇ ಸೇರಿದ್ದು ಎಂಬ ಮಾತು ಕೇಳಿಬಂದಿತ್ತು.
‘ದರೋಡೆ ಪ್ರಕರಣ ನಡೆದ ಕೃಷ್ಣಾನಾಯ್ಕ ಅವರು ಸಂಡೂರು ಠಾಣೆಗೆ ಹಾಜರಾಗಿ, ಆಭರಣಗಳ ಖರೀದಿ ರಸೀದಿಗಳನ್ನು ಹಾಜರುಪಡಿಸಿ, ತಮ್ಮದೇ ಎಂದು ಸ್ಪಷ್ಟಪಡಿಸಿದ್ದರು.
ಕೃಷ್ಣಾನಾಯ್ಕ ಅವರು ಆರ್ಥಿಕ ಸಂಕಷ್ಟದಲ್ಲಿದ್ದ ಸಂಡೂರಿನ ತಮ್ಮ ಸಂಬಂಧಿ ಗುತ್ತಿಗೆದಾರ ಸ್ವಾಮಿನಾಯ್ಕ ಎಂಬುವವರಿಗೆ ಆಭರಣಗಳನ್ನು ನೀಡಿ, ಬಳಸಿಕೊಳ್ಳುವಂತೆ ಹೇಳಿದ್ದರು. ಅವರು ಆಭರಣಗಳನ್ನು ತಮ್ಮ ಸಂಬಂಧಿ ಜ್ಯೋತಿಬಾಯಿ ಅವರಿಗೆ ನೀಡಿದ್ದರು. ಅದನ್ನು ಅರಿತ ಆರೋಪಿ ಇತರರೊಂದಿಗೆ ಸೇರಿ ದರೋಡೆ ಮಾಡಿದ್ದ. ಪ್ರಕರಣದಲ್ಲಿ ಎಲ್ಲರೂ ಸಂಬಂಧಿಕರೇ ಆಗಿದ್ದಾರೆ’ ಎಂದು ಹೇಳಿದರು.