ಕುಮಟಾ: ಕಳೆದ ಹಲವಾರು ವರ್ಷಗಳಿಂದ ಇಲ್ಲಿಯ ಮೀನು ಮಾರುಕಟ್ಟೆ ರಸ್ತೆಯ ದುರಸ್ತಿ ಕಾರ್ಯ ಕೈಗೊಳ್ಳದಿರುವುದನ್ನು ಆಕ್ಷೇಪಿಸಿ ಶನಿವಾರ ಸ್ಥಳೀಯರು ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.ರಸ್ತೆಯಲ್ಲಿ ಟೈರ್, ಪೈಪ್ ಇಟ್ಟು ವಾಹನಗಳ ಸಂಚಾರ ತಡೆಯಲಾಯಿತು.
ಸ್ಥಳೀಯ ವರ್ತಕ ವೆಂಕಟೇಶ ಪ್ರಭು ಮಾತನಾಡಿ, ‘ಬೇಸಿಗೆಯಲ್ಲಿ ದೂಳು, ಮಳೆಗಾಲದಲ್ಲಿ ನೀರು ತುಂಬಿದ ಹೊಂಡದಲ್ಲಿ ಸಂಚಾರ ಅಸಾಧ್ಯ ವಾಗಿದೆ. ರಸ್ತೆ ದುರಸ್ತಿಗಾಗಿ ಕಾಯುತ್ತಿ ರುವ ನಮ್ಮ ತಾಳ್ಮೆಗೆ ಸಂಬಂಧಪಟ್ಟವರು ಬೆಲೆಯನ್ನೇ ಕೊಡುತ್ತಿಲ್ಲ. ಹಿಂದೆ ಇದೇ ರಸ್ತೆಯ ಒಂದು ತುದಿ ದುರಸ್ತಿ ಮಾಡಲಾಗಿದೆ. ಉಳಿದ 50 ಮೀಟರ್ ಗಳಷ್ಟನ್ನು ಮಾತ್ರ ಹಾಗೇ ಇಡಲಾಗಿದೆ’ ಎಂದು ದೂರಿದರು.
ಸ್ಥಳಕ್ಕೆ ಬಂದ ಪುರಸಭೆ ಮುಖ್ಯಾಧಿ ಕಾರಿ ಮಾತನಾಡಿ, ‘ಪುರಸಭೆಯ ನಗರೋತ್ಥಾನ ಯೋಜನೆಯಡಿ ಸುಭಾಸ್ ರಸ್ತೆಯಿಂದ ಮೀನು ಮಾರು ಕಟ್ಟೆ ವರೆಗೆ ದುರಸ್ತಿಗಾಗಿ ₹ 27 ಲಕ್ಷ ಮಂಜೂರಾಗಿದೆ. ಕೆಲ ತಿಂಗಳಲ್ಲಿ ಕಾಮಗಾರಿ ಆರಂಭವಾಗಬಹುದು. ಅಲ್ಲಿಯವರೆಗೆ ತಾತ್ಕಾಲಿಕವಾಗಿ ಹೇಗೆ ದುರಸ್ತಿ ಕಾರ್ಯ ನಡೆಸಬಹುದು ಎನ್ನುವ ಬಗ್ಗೆ ಪುರಸಭೆ ಅಧ್ಯಕ್ಷರ ಜೊತೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು’ ಎಂದರು.
ಸ್ಥಳೀಯರಾದ ನಾಗರಾಜ ಭಂಡಾರಿ, ಶ್ರೀಧರ ಗಾವಡಿ, ಸಿಂಜಾಂವ್ ಡಿಸೋಜಾ, ಪುರಸಭೆ ಸದಸ್ಯೆ ಅನಿತಾ ಮಾಪಾರಿ, ಬಿಜೆಪಿ ಮುಖಂಡ ಡಾ. ಜಿ.ಜಿ.ಹೆಗಡೆ ಇದ್ದರು.