ಮುಂಬೈ: ರಾಷ್ಟ್ರೀಯ ಪ್ರಶಸ್ತಿ ಸೇರಿದಂತೆ ಸಿನಿಮಾ ಪ್ರಶಸ್ತಿ ಸಮಾರಂಭಗಳ ಪ್ರಸ್ತುತತೆಯನ್ನು ಚಲನಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಪ್ರಶ್ನಿಸಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭಗಳಿಗೆ ದೇಶದ ಮಹಾನ್ ನಿರ್ದೇಶಕ ಅಮೀರ್ ಖಾನ್ ಯಾವಾಗಲೂ ಗೈರು ಹಾಜರಾಗುವುದು ಅವುಗಳ ಮಹತ್ವವನ್ನು ಪ್ರಶ್ನಿಸುವಂತೆ ಮಾಡುತ್ತದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
‘ವಾಸ್ತವವೆಂದರೆ, ದೇಶದ ಮಹಾನ್ ಚಿತ್ರನಿರ್ದೇಶಕ ಅಮೀರ್ ಖಾನ್, ರಾಷ್ಟ್ರೀಯ ಪ್ರಶಸ್ತಿ ಸೇರಿದಂತೆ ಯಾವ ಪ್ರಶಸ್ತಿ ಪ್ರದಾನ ಸಮಾರಂಭಗಳಿಗೂ ಹಾಜರಾಗುವುದಿಲ್ಲ. ಇದು ಅಂತಹ ಸಮಾರಂಭಗಳ ಅಗತ್ಯದ ಕುರಿತು ದನಿ ಎತ್ತುತ್ತದೆ ಎಂದು ವರ್ಮಾ ಬರೆದಿದ್ದಾರೆ.
‘ಅತ್ಯುತ್ಕೃಷ್ಟ ಗುಣಮಟ್ಟದ ಸಿನಿಮಾಗಳನ್ನು ಅಮೀರ್ ನಿರ್ದೇಶಿಸುತ್ತಿದ್ದಾರೆ. ರಾಷ್ಟ್ರ ಪ್ರಶಸ್ತಿ ಒಳಗೊಂಡಂತೆ ಭಾರತದ ಯಾವುದೇ ಸಿನಿಮಾ ಸಮಿತಿ ತಮ್ಮನ್ನು ಪರಿಗಣಿಸಬೇಕು ಎಂಬುದರ ಕುರಿತು ಅವರು ತಲೆಕೆಡಿಸಿಕೊಳ್ಳುವುದಿಲ್ಲ’ ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ.
ಇತ್ತೀಚೆಗೆ ಪ್ರಕಟಗೊಂಡ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಅಕ್ಷಯ್ ಕುಮಾರ್ ಅವರಿಗೆ ನೀಡಲಾಗಿದೆ. ಈ ಪ್ರಶಸ್ತಿ ‘ದಂಗಲ್’ ಚಿತ್ರದಲ್ಲಿನ ಅಭಿನಯಕ್ಕೆ ಅಮೀರ್ ಖಾನ್ ಅವರಿಗೆ ಸಿಗಬೇಕಿತ್ತು ಎಂಬ ಅಭಿಪ್ರಾಯಗಳು ಕೇಳಿಬಂದಿದ್ದವು.