ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅನ್ನದಾತರ ಆತ್ಮಹತ್ಯೆ ಆತಂಕಕಾರಿ’

Last Updated 24 ಏಪ್ರಿಲ್ 2017, 5:57 IST
ಅಕ್ಷರ ಗಾತ್ರ

ಶಿವನೂರು (ಚನ್ನಮ್ಮನ ಕಿತ್ತೂರು): ‘ಸತತ ಬರಗಾಲದ ಹೊಡೆತಕ್ಕೆ ಸಿಕ್ಕು ತೀವ್ರ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿರುವ ಅನ್ನದಾತರ ನೆರವಿಗೆ ಸರ್ಕಾರ, ಸಮಾಜ ಧಾವಿಸಬೇಕು’ ಎಂದು ಚಲನಚಿತ್ರ ನಿರ್ಮಾಪಕ ಆನಂದ ಅಪ್ಪುಗೋಳ ಮನವಿ ಮಾಡಿದರು.ಶಿವನೂರು ಗ್ರಾಮದ ಆನಂದ ಅಪ್ಪುಗೋಳ ಬಳಗದ ಯುವಕರು ಕಲ್ಮೇಶ್ವರ ಗುಡಿಯಲ್ಲಿ ಶನಿವಾರ ಸಂಜೆ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ರೈತ ಆತ್ಮಹತ್ಯೆಗೆ ಮುಂದಾಗಬಾರದು. ಅನ್ನದಾತ ಸುಖವಾಗಿದ್ದರೆ ದೇಶವೂ ಸುಭಿಕ್ಷವಾಗಿರುತ್ತದೆ. ಆದರೆ ಕಳೆದ ಮೂರು ವರ್ಷಗಳಿಂದ ಸಮರ್ಪಕವಾಗಿ ಮಳೆ ಆಗದ್ದರಿಂದ ರೈತರು ಸಂಕಷ್ಟ ಪರಿಸ್ಥಿತಿ ಎದುರಿಸುವಂತಾಗಿದೆ. ಇಂಥ ಸಂದರ್ಭದಲ್ಲಿ ಅವರ ಸಹಾಯಕ್ಕೆ ಸಮಾಜ ಮುಂದಾಗಬೇಕು. ರೈತ ಕುಟುಂಬದ ಮಕ್ಕಳು ಮದುವೆ ವಯಸ್ಸಿಗೆ ಬಂದಿದ್ದರೆ ಸಾಮೂಹಿಕ ವಿವಾಹ ಏರ್ಪಡಿಸಿ ಸಹಾಯ ಹಸ್ತ ಚಾಚೋಣ’ ಎಂದರು.

‘ಹಳ್ಳಿ ಯುವಕರು ದುಶ್ಚಟಗಳಿಂದ ದೂರು ಇರಬೇಕು. ಸದೃಢ ಮತ್ತು ಸ್ವಾಸ್ಥ್ಯ ಗ್ರಾಮ ಕಟ್ಟಲು ಮುಂದಾಗಬೇಕು. ಈ ಹಿನ್ನೆಲೆಯಲ್ಲಿ ಕಿತ್ತೂರು ತಾಲ್ಲೂಕಿನಾದ್ಯಂತ ಬರುವ ಗ್ರಾಮಗಳಲ್ಲಿ ರಾಯಣ್ಣ ಜಿಮ್ ಮತ್ತು ಮಹಿಳೆಯರಿಗಾಗಿ ರಾಣಿ ಚನ್ನಮ್ಮನ ಹೆಸರಿನಲ್ಲಿ ಯೋಗ ತರಬೇತಿ ಕೇಂದ್ರ ತೆರೆಯುವ ಚಿಂತನೆ ನಡೆಸಿದ್ದೇನೆ’ ಎಂದು ಅವರು ಪ್ರಕಟಿಸಿದರು.

‘ನಾಡಿನ ಸ್ವಾಭಿಮಾನ ಮತ್ತು ಸ್ವಾತಂತ್ರ್ಯಕ್ಕಾಗಿ ರಾಣಿ ಚನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನಂತಹ ಅನೇಕರ ವೀರರು ಹೋರಾಟ ನಡೆಸಿ ಪ್ರಾಣತ್ಯಾಗ ಮಾಡಿದ್ದಾರೆ. ಅದರಲ್ಲಿ ಈ ಭಾಗದಲ್ಲಿ ಇಂದಿನ ಹಿರಿಯ ತಲೆಮಾರುಗಳ ಮುತ್ತಜ್ಜರು ಅನೇಕರು ಇದ್ದಾರೆ. ರಾಯಣ್ಣ ಹೋರಾಟದಲ್ಲಿ ಸಾಥ್ ನೀಡಿದ ಅವಿಸ್ಮರಣೀಯ ವೀರರ ಪೀಳಿಗೆಯ ಋಣ ಕಡಿಮೆ ಮಾಡಿಕೊಳ್ಳುವ ಪ್ರಯತ್ನ ಆಗಬೇಕಾಗಿದೆ’ ಎಂದು  ಅವರು ನುಡಿದರು.

‘ಈ ಭಾಗದ ಜನತೆಯ ನಿರೀಕ್ಷೆಯಂತೆ ಕಿತ್ತೂರು ಕ್ಷೇತ್ರ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಮತ್ತು ರಾಜಕೀಯವಾಗಿ ಅಭಿವೃದ್ಧಿ ಹೊಂದಿಲ್ಲದಿರುವುದು ವಿಷಾದದ ಸಂಗತಿ. ಸಂಸ್ಥಾನ ಕಾಲದ ವೈಭವವನ್ನು ಮರಳಿ ಇಲ್ಲಿ ಸ್ಥಾಪಿಸಬೇಕಾಗಿದೆ. ಅದಕ್ಕಾಗಿ ಯುವಕರ ನೆರವಿನ ಅಗತ್ಯವಿದೆ’ ಎಂದು ಅವರು ಆಶಿಸಿದರು.‘ಶಿವನ ಊರು ಎಂದು ಹೆಸರು ಪಡೆದಿದ್ದರೂ ಇಲ್ಲಿಯ ಯಾವುದೇ ಗುಡಿಗೆ ಗೋಪುರವಿಲ್ಲ. ಕಾರಣ ಗ್ರಾಮದ ಜಾಗೃತ ಸ್ಥಾನವಾಗಿರುವ ಕಲ್ಮೇಶ್ವರ ದೇವಸ್ಥಾನಕ್ಕೆ ಗೋಪುರ ನಿರ್ಮಿಸಿ ಕೊಡಬೇಕು, ಬಡ ವಿದ್ಯಾರ್ಥಿಗಳು ಗ್ರಂಥಾಲಯ ಓದಿನಿಂದ ವಂಚಿತರಾಗಿದ್ದು, ಅಗತ್ಯ ಪುಸ್ತಕ ಇನ್ನಿತರ ಸಾಮಗ್ರಿ ಕೊಳ್ಳಲು ಸಹಾಯ ಮಾಡಬೇಕು. ಶೈಕ್ಷಣಿಕ ಅಭಿವೃದ್ಧಿಗೆ ನೆರವಾಗಬೇಕು’ ಎಂದು ಯುವಕರು ಮನವಿ ಮಾಡಿಕೊಂಡರು.

ಗ್ರಾಮದ ಹಿರಿಯ ಮುಖಂಡ ಉಮೇಶ ಕಾಳಚರಂತಿಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯ್ತಿ ಸದಸ್ಯರಾದ ಗಿರಿಜಾ ಬೈಲೂರ, ಸುನೀಲ ಹುಬ್ಬಳ್ಳಿ, ಶಿಕ್ಷಕ ಎನ್. ಜಿ. ಪಾಟೀಲ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT