ಹುಣಸೂರು: ವಿಚಾರ ಗೋಷ್ಠಿಗಳು, ವಿಮರ್ಶೆಗಳು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಸಹಕಾರಿ ಆಗಲಿದ್ದು, ಚಿಂತಕರ ಚಾವಡಿ ಉತ್ತಮ ಗೋಷ್ಠಿಗಳಿಗೆ ಆದ್ಯತೆ ನೀಡಬೇಕಾಗಿದೆ ಎಂದು ಪ್ರೊ.ಎಚ್.ಎಂ.ರಾಜಶೇಖರ್ ಅಭಿಪ್ರಾಯಿಸಿದರು.
ನಗರದ ದೇವರಾಜ ಅರಸು ಪ್ರಥಮದರ್ಜೆ ಕಾಲೇಜಿನಲ್ಲಿ ಭಾನುವಾರ ನಡೆದ ‘ಬೆಳಕಿನಡೆಗೆ ಪುಟ್ಟ ಹೆಜ್ಜೆ’ ಬೆಳ್ಳಿ ಹೆಜ್ಜೆ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಚಿಂತಕರು ಹಾಗೂ ವಿಷಯ ತಜ್ಞರ ಕೂಟಗಳು ಚುರುಕಾಗಿ ತಮ್ಮ ಕೆಲಸವನ್ನು ಎಲೆ ಮರೆ ಕಾಯಿಯಂತೆ ನಿರಂತರವಾಗಿ ನಡೆಸುತ್ತಿರಬೇಕು. ಕೂಟಗಳು ಉತ್ತಮ ಭವಿಷ್ಯದ ಪ್ರಜೆಗಳನ್ನು ಹುಟ್ಟು ಹಾಕುವ ಕೇಂದ್ರವಾಗಿ ಅಭಿವೃದ್ಧಿ ಹೊಂದುವುದ ರಿಂದ ದೇಶಕ್ಕೆ ಲಾಭವಾಗಲಿದೆ ಎಂದರು.
ಸ್ವಾತಂತ್ರ್ಯ ನಂತರದಲ್ಲಿ ದೆಹಲಿಯಲ್ಲಿ ಕೆಲವು ಚಿಂತಕರು ಆರಂಭಿಸಿದ ‘ಶನಿವಾರ ಕ್ಲಬ್’ ಇಂದು ವಿಶ್ವದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ದೇಶ ವಿದೇಶಗಳಿಂದ ಚಿಂತಕರು ಬಂದು ವಿವಿಧ ವಿಚಾರಗಳ ಕುರಿತ ಚರ್ಚೆಗಳನ್ನು ನಡೆಸುತ್ತಿದ್ದಾರೆ. ಇದೇ ಮಾದರಿಯಲ್ಲಿ ಬೆಳಕಿನ ನಡೆಗೆ ಪುಟ್ಟ ಹೆಜ್ಜೆ ಸಾಗಬೇಕಾಗಿದೆ ಎಂದರು.
‘ಬೆಳಕಿನೆಡೆಗೆ ಪುಟ್ಟ ಹೆಜ್ಜೆ’ ಸಂಘಟನೆ ವಿಚಾರ ಚಿಂತನಾ ಮಂಥನ ನಡೆಸುವುದರೊಂದಿಗೆ ಭವಿಷ್ಯದ ಕುಡಿಗ ಳಿಗೆ ಸಂಸ್ಕಾರ ತಿಳಿಸುವ ಕೆಲಸವೂ ಮಾಡಬೇಕಾಗಿದೆ. ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಹಿರಿಯರನ್ನು ಗೌರವಿಸುವ ಸಂಸ್ಕೃತಿ ಮಾಯವಾಗಿದೆ. ಗುರುಗಳ ಋಣ ತಿಳಿಯದ ವಿದ್ಯಾರ್ಥಿಗಳಿಗೆ ತಿಳಿ ಹೇಳಬೇಕಾಗಿದೆ . ವಿಶ್ವದಲ್ಲಿ ಒಬ್ಬ ವ್ಯಕ್ತಿ ಏನ್ನನ್ನಾದರೂ ಸಾಧಿಸಬೇಕಿದ್ದರೂ ಆ ವ್ಯಕ್ತಿ ಹಿಂದೆ ಒಬ್ಬ ಗುರು ಇರುತ್ತಾನೆ. ಈ ಸಣ್ಣ ಅಂಶ ಇಂದಿನ ವಿದ್ಯಾರ್ಥಿಗಳಿಗೆ ತಿಳಿಯದಾಗಿರುವುದು ವಿಪರ್ಯಾಸ ಎಂದರು.
ರೇಣುಕಪ್ರಸಾದ್ ಮಾತನಾಡಿ, ವಿಷಯಗಳನ್ನು ಚರ್ಚಿಸಿ ಜಾಗೃತಿ ಮೂಡಿಸುವ ಉದ್ದೇಶದಿಂದ 25 ತಿಂಗಳ ಹಿಂದೆ ಮೋದೂರು ಮಹೇಶ್ ಆರಾಧ್ಯ ನೇತೃತ್ವದಲ್ಲಿ 8 ಸದಸ್ಯರೊಂದಿಗೆ ಆರಂಭವಾದ ಈ ಸಂಘಟನೆ ಈಗ 30 ಸದಸ್ಯರನ್ನು ಹೊಂದಿದೆ ಎಂದರು. ಪ್ರತಿ ತಿಂಗಳು ಹುಣ್ಣಿಮೆ ದಿನದಲ್ಲಿ ನಗರದ ಪ್ರಕೃತಿ ತಾಣ ಅಯ್ಯಪ್ಪ ಬೆಟ್ಟದಲ್ಲಿ ಚಿಂತಕರ ಸಮಾಗಮದಲ್ಲಿ ವಿಷಯ ಮಂಡಿಸಿ ಚರ್ಚೆ ನಡೆಸುವ ಸಂಸ್ಕೃತಿ ಬೆಳೆಸಿಕೊಂಡಿದ್ದೇವೆ ಎಂದರು.
ಚರ್ಚೆಗಳ ಮೂಲಕ ಪರಿವರ್ತನೆ ಹಾಗೂ ಜಾಗೃತಿ ಮೂಡಿಸಲು ಸಾಧ್ಯ ಎಂಬ ಆಶಯದೊಂದಿಗೆ ಈ ಸಂಘಟನೆ ಹೆಜ್ಜೆ ಹಾಕಿದೆ ಎಂದರು.
ಡಾ.ವೃಷಭೇಂದ್ರ ಸ್ವಾಮಿ ಸಂಚಿಕೆ ಬಿಡುಗಡೆ ಮಾಡಿದರು. ಪ್ರೊ. ರಾಜಶೇ ಖರ್ ‘ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಪ್ರಸ್ತುತತೆ ಕುರಿತು ವಿಚಾರ ಮಂಡಿಸಿ ದರು. ರಾಜ್ಯದ ವಿವಿಧ ಭಾಗದಿಂದ ಆಗಮಿಸಿದ್ದ 30 ಕವನ ಸಾಹಿತಿಗಳು ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದರು. ಬೆಳಕಿನೆಡೆಗೆ ಪುಟ್ಟ ಹೆಜ್ಜೆ ಸಂಘಟನೆಯ ಅಧ್ಯಕ್ಷ ಮೋದೂರು ಮಹೇಶ್ ಆರಾಧ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.