ನವದೆಹಲಿ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ (ಎಪಿಎಂಸಿ) ಏಕಸ್ವಾಮ್ಯಕ್ಕೆ ಅಂತ್ಯ ಹಾಡಿ, ರೈತರಿಗೆ ತಾವು ಬೆಳೆದ ಬೆಳೆಗಳನ್ನು ರಾಜ್ಯದ ಎಲ್ಲಿ ಬೇಕಾದರೂ ಮಾರಾಟ ಮಾಡಲು ಅವಕಾಶ ಕಲ್ಪಿಸುವ ಕರಡು ಕಾನೂನನ್ನು ಕೇಂದ್ರ ಕೃಷಿ ಸಚಿವಾಲಯ ಸಿದ್ಧಪಡಿಸಿದೆ.
ಸಚಿವಾಲಯ ರೂಪಿಸಿರುವ ‘ಕೃಷಿ ಉತ್ಪನ್ನ ಮತ್ತು ಜಾನುವಾರು ಮಾರುಕಟ್ಟೆ (ಉತ್ತೇಜನ ಮತ್ತು ಸಹಕಾರ) ಕಾಯ್ದೆ’ಯು ಖಾಸಗಿಯವರಿಗೆ ಸಗಟು ಮಾರುಕಟ್ಟೆಗಳನ್ನು ಸ್ಥಾಪಿಸಲು ಅವಕಾಶ ನೀಡುತ್ತದೆ. ಇದರಿಂದ ರೈತರಿಗೆ ನೆರವಾಗಲಿದೆ ಎಂದು ಹೇಳಲಾಗುತ್ತಿದೆ. ತಾವು ಬೆಳೆದ ಉತ್ಪನ್ನಗಳನ್ನು ಮಾರಾಟ ಮಾಡಲು ಹತ್ತಿರದಲ್ಲೇ ಅವರಿಗೆ ಮಾರುಕಟ್ಟೆಗಳು ಲಭ್ಯವಾಗಲಿದೆ.
‘ಸದ್ಯ, ಪ್ರತಿ 462 ಚದರ ಕಿ.ಮೀ ವ್ಯಾಪ್ತಿಯಲ್ಲಿ ಒಂದು ವ್ಯವಸ್ಥಿತ ಮಾರುಕಟ್ಟೆ ಇದೆ. ಈ ಕಾನೂನು ಜಾರಿಗೆ ಬಂದರೆ, ಕನಿಷ್ಠ 80 ಚದರ ಕಿ.ಮೀ ವ್ಯಾಪ್ತಿಯಲ್ಲಿ ಮಾರುಕಟ್ಟೆಗಳು ಲಭ್ಯವಿರಲಿದೆ’ ಎಂದು ಕೃಷಿ ಸಚಿವ ರಾಧಾಮೋಹನ್ ಸಿಂಗ್ ಹೇಳಿದ್ದಾರೆ.