ಹೈದರಾಬಾದ್: ಮುಗ್ಧ ಜನರ ವಿರುದ್ಧ ಗೋ ರಕ್ಷಕರು ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಈ ರೀತಿಯ ದಾಳಿಗಳು ಮುಂದುವರಿದರೆ ದೇಶದಲ್ಲಿ ಅರಾಜಕತೆ ಉಂಟಾಗುತ್ತದೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದಿನ್ ಓವೈಸಿ ಸೋಮವಾರ ಎಚ್ಚರಿಸಿದ್ದಾರೆ.
ಬಿಜೆಪಿ ಹಾಗೂ ಸರ್ಕಾರಕ್ಕೆ ಗೋ ರಕ್ಷಕರ ಬಗ್ಗೆ ಸಹಾನುಭೂತಿ ಇರುವುದರಿಂದ ಅವರನ್ನು ತಡೆಯುತ್ತಿಲ್ಲ ಎಂದು ಹೇಳಿದ್ದಾರೆ. ಗೋ ರಕ್ಷಕರಿಗೆ ಪ್ರಧಾನಿ ಮೋದಿ ಅವರು ಈ ಹಿಂದೆ ಮಾಡಿದ ಮನವಿ ಕುರಿತು ಪ್ರತಿಕ್ರಿಯೆ ನೀಡಿರುವ ಓವೈಸಿ, ‘ಪ್ರಧಾನಿ ಕೇವಲ ಮಾತನಾಡುತ್ತಾರೆ. ಏನನ್ನೂ ಮಾಡುವುದಿಲ್ಲ’ ಎಂದಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಈಚೆಗೆ ಗೋವುಗಳನ್ನು ಸಾಗಿಸುತ್ತಿದ್ದವರ ಮೇಲೆ ಗೋ ರಕ್ಷಕರು ನಡೆಸಿದ ಹಲ್ಲೆ ಕುರಿತು ಅವರು ಪ್ರತಿಕ್ರಿಯಿಸಿದ್ದಾರೆ.
ಗೋ ರಕ್ಷಕರು ನಡೆಸುತ್ತಿರುವ ಹಲ್ಲೆ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಈವರೆಗೂ ಒಂಬತ್ತು ಜನರನ್ನು ಹತ್ಯೆ ಮಾಡಿದ್ದು ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಓವೈಸಿ ಹೇಳಿದ್ದಾರೆ.