ಕಾಳಗಿ (ಕಲಬುರ್ಗಿ ಜಿಲ್ಲೆ): ಮದುವೆ ಮನೆಯಲ್ಲಿ ಸಂಭ್ರಮ ಮನೆ ಮಾಡಿತ್ತು. ದೇವರ ಅಕ್ಷತೆ ಮುಗಿದು ನವದಂಪತಿ ಖುಷಿಯಲ್ಲಿದ್ದರು. ಸ್ನೇಹಿತರು, ಸಂಬಂಧಿಕರು ಅಕ್ಷತೆ ಹಾಕಲು ಕಾಯುತ್ತಿದ್ದರು. ಇಷ್ಟರಲ್ಲಿ ಸ್ಥಳಕ್ಕೆ ಅಧಿಕಾರಿಗಳ ತಂಡ ಧಾವಿಸಿತು. ಇದನ್ನು ಕಂಡು ನವದಂಪತಿ ಮದುವೆ ಮನೆಯಿಂದಲೇ ಓಡಿ ಹೋದರು!
ಚಿತ್ತಾಪುರ ತಾಲ್ಲೂಕಿನ ತೆಂಗಳಿ ಗ್ರಾಮದಲ್ಲಿ ಸೋಮವಾರ ಭೀಮೇಶ್ವರ ದೇವಾಲಯ ಬಾಲ್ಯವಿವಾಹ ನಡೆಯುತ್ತಿರುವ ಮಾಹಿತಿ ಪಡೆದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿ.ವಿ.ರಾಮನ್ ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಿವಶರಣ್ಪ ನೇತೃತ್ವದ ಅಧಿಕಾರಿಗಳ ತಂಡ ಪರಿಶೀಲನೆಗೆ ತೆರಳಿತ್ತು. ಇವರನ್ನು ನೋಡಿದ ನವದಂಪತಿ ಹಾಗೂ ಪಾಲಕರು ಸ್ಥಳದಿಂದಲೇ ಪರಾರಿಯಾದರು. ತೆಂಗಳಿಯ 14 ವರ್ಷದ ಬಾಲಕಿಯನ್ನು ಕಲಬುರ್ಗಿಯ 24 ವರ್ಷದ ಯುವಕನಿಗೆ ಕೊಟ್ಟು ಮದುವೆ ಮಾಡಲಾಗುತ್ತಿತ್ತು.
ಬಾಲ್ಯವಿವಾಹಕ್ಕೆ ಕಾರಣರಾದ ವಧು-ವರನ ಪಾಲಕರು, ಲಗ್ನಪತ್ರಿಕೆಯಲ್ಲಿ ಸುಖಾಗಮನ ಬಯಸಿದ ಸಂಬಂಧಿಕರು, ದೇವಸ್ಥಾನ ಸಮಿತಿ ಅಧ್ಯಕ್ಷರು, ಮಂತ್ರ ಪಠಿಸಿದ ಅರ್ಚಕರು ಸೇರಿದಂತೆ 9 ಜನರ ವಿರುದ್ಧ ಬಾಲ್ಯವಿವಾಹ ನಿಷೇಧ ಕಾಯ್ದೆಯಡಿ ಕಾಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.