ವಿವಾದಾತ್ಮಕ ಹೇಳಿಕೆಗಳನ್ನು ಟ್ವೀಟ್ ಮಾಡುವ ಮೂಲಕ ಸುದ್ದಿಯಾಗುತ್ತಿರುವ ನಿರ್ದೇಶಕ ರಾಮ್ಗೋಪಾಲ್ ವರ್ಮಾ ಅವರು, ‘ಬಾಹುಬಲಿ 2: ಕನ್ಕ್ಲೂಷನ್’ ಚಿತ್ರದ ನಿರ್ದೇಶಕ ರಾಜಮೌಳಿ ಕುರಿತು ಮಾತನಾಡಿದ್ದಾರೆ.
ಪ್ರತಿಯೊಂದು ವಿಷಯವನ್ನು ಭಿನ್ನ ದೃಷ್ಟಿಕೋನದಿಂದಲೇ ನೋಡುವ ರಾಮ್ ಗೋಪಾಲ್ ವರ್ಮಾ (ಆರ್ಜಿವಿ) ವ್ಯಕ್ತಿಯೊಬ್ಬರ ಪ್ರಶಂಸೆ ಮಾಡುವುದು ಅಪರೂಪ, ಆದರೆ ಯಶಸ್ವಿ ನಿರ್ದೇಶಕ ರಾಜಮೌಳಿ ಅವರು ಆರ್ಜಿವಿ ಅವರಿಂದ ಶಭಾಷ್ ಎನಿಸಿಕೊಂಡಿದ್ದಾರೆ. ಆದರೆ ರಾಜಮೌಳಿಯನ್ನು ಹೊಗಳುವ ಜೊತೆಗೆ ಉಳಿದ ನಿರ್ದೇಶಕರ ಕಾಲೆಳೆದಿದ್ದಾರೆ.
‘ಬಾಹುಬಲಿ 2; ದಿ ಕನ್ಕ್ಲೂಷನ್’ ಚಿತ್ರವು ದೇಶದ ಉಳಿದ ನಿರ್ದೇಶಕರು, ನಿರ್ಮಾಪಕರಿಗೆ ತಾವಿನ್ನೂ ಧಾರಾವಾಹಿ ನಿರ್ಮಿಸುತ್ತಿರುವ ಭಾವ ಮೂಡಿಸಲಿದೆ’ ಎಂದು ಟ್ವೀಟ್ ಮಾಡಿದ್ದಾರೆ.
ರಾಜಮೌಳಿ ಅವರ ವೃತ್ತಿಪರತೆ ಹೊಗಳುವ ಜೊತೆಗೆ. ದೇಶದ ಯಾವ ನಿರ್ದೇಶಕರೂ ರಾಜಮೌಳಿಯಷ್ಟು ಪ್ರತಿಭಾವಂತರಲ್ಲ ಎಂಬುದನ್ನೂ ಸೂಚ್ಯವಾಗಿ ತಿಳಿಸಿದ್ದಾರೆ.
ಅಂದಹಾಗೆ ಅಮಿತಾಭ್ ಬಚ್ಚನ್ ನಟನೆಯ ‘ಸರ್ಕಾರ್ 3’ ಚಿತ್ರದ ನಿರ್ದೇಶನದಲ್ಲಿ ಆರ್ಜಿವಿ ಬ್ಯುಸಿಯಾಗಿದ್ದಾರೆ.