ವಾಷಿಂಗ್ಟನ್ (ಪಿಟಿಐ): ‘ಕೃಷಿಸಾಲ ಮನ್ನಾ ಪ್ರವೃತ್ತಿಯು ದೇಶದ ಆರ್ಥಿಕ ಪ್ರಗತಿಗೆ ಅಡ್ಡಗಾಲು ಆಗಲಿದೆ’ ಎಂದು ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್ ಎಚ್ಚರಿಕೆ ನೀಡಿದ್ದಾರೆ.
‘ಒಂದು ವೇಳೆ ಎಲ್ಲ ರಾಜ್ಯ ಸರ್ಕಾರಗಳು ರೈತರ ಕೃಷಿಸಾಲ ಮನ್ನಾ ಮಾಡುವ ಪ್ರವೃತ್ತಿ ಮುಂದುವರಿಸಿದಲ್ಲಿ ದೇಶದ ಒಟ್ಟು ಆಂತರಿಕ ಉತ್ಪನ್ನವು (ಜಿಡಿಪಿ) ಶೇ 2ರಷ್ಟು ಕೊರತೆಯಾಗುವ ಅಪಾಯವಿದೆ’ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
‘₹36,000 ಕೋಟಿ ಕೃಷಿ ಸಾಲಮನ್ನಾ ಮಾಡುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ನಿರ್ಧಾರಕ್ಕೆ ನನ್ನ ಸಹಮತ ಇಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇಲ್ಲಿಯ ಪ್ರತಿಷ್ಠಿತ ಪೀಟರ್ಸನ್ ಸಂಸ್ಥೆಯಲ್ಲಿ ನಡೆದ ಸಂವಾದದಲ್ಲಿ ಅವರು ಮಾತನಾಡುತ್ತಿದ್ದರು.
ವಿಶ್ವ ಬ್ಯಾಂಕ್ ಮತ್ತು ಅಂತರರಾಷ್ಟ್ರೀಯ ಹಣಕಾಸು ನಿಧಿ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಲು ಅರವಿಂದ್ ಸುಬ್ರಮಣಿಯನ್ ಅವರು ಇಲ್ಲಿಗೆ ಬಂದಿದ್ದಾರೆ.
‘ಕೃಷಿಸಾಲ ಮನ್ನಾ ಕುರಿತ ಆತಂಕ ಹೊರತುಪಡಿಸಿದರೆ ಭಾರತದ ಆರ್ಥಿಕ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಕಳವಳ ಪಡುವ ಸ್ಥಿತಿ ಇಲ್ಲ. ಕಾರ್ಪೊರೇಟ್ ವಲಯ ಉತ್ತಮ ಪ್ರಗತಿ ಸಾಧಿಸುತ್ತಿದೆ’ ಎಂದು ಅವರು ಹರ್ಷ ವ್ಯಕ್ತಪಡಿಸಿದರು.
* ರಾಜ್ಯ ಸರ್ಕಾರಗಳ ಕೃಷಿಸಾಲ ಮನ್ನಾ ನಿರ್ಧಾರವು ಕೇಂದ್ರ ಸರ್ಕಾರದ ಆರ್ಥಿಕ ಸುಧಾರಣೆಗೆ ತೊಡಕಾಗಿದೆ