ನ್ಯೂಯಾರ್ಕ್: ಅಮೆರಿಕ ಸೇರಿದಂತೆ ಆರ್ಥಿಕವಾಗಿ ಮುಂದುವರೆದ ರಾಷ್ಟ್ರಗಳು ಈಗ ಹೊಸದಾಗಿ ಪ್ರತಿಪಾದಿಸುತ್ತಿರುವ ರಕ್ಷಣಾತ್ಮಕ ನೀತಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಉರ್ಜಿತ್ ಪಟೇಲ್ ಟೀಕಿಸಿದ್ದಾರೆ.
‘ಮುಕ್ತ ವ್ಯಾಪಾರ ಮತ್ತು ವಾಣಿಜ್ಯ ನೀತಿಯ ಪ್ರಯೋಜನವನ್ನು ಇಡೀ ವಿಶ್ವ ಪಡೆಯುತ್ತಿರುವಾಗ ವಾಣಿಜ್ಯ, ವ್ಯಾಪಾರದಂತಹ ವಿಷಯಗಳನ್ನು ರಕ್ಷಣಾತ್ಮಕ ವಿಷಯಕ್ಕೆ ಬಳಸಿದರೆ ಪ್ರಗತಿಯ ಮೇಲೆ ದುಪ್ಪರಿಣಾಮವಾಗಲಿದೆ’ ಎಂದು ಅವರು ಎಚ್ಚರಿಸಿದ್ದಾರೆ.
‘ವಿಶ್ವದ ಇತರ ರಾಷ್ಟ್ರಗಳ ಉದ್ಯೋಗಿಗಳು ಇಲ್ಲದಿದ್ದರೆ ಅಮೆರಿಕದ ಆ್ಯಪಲ್, ಸಿಸ್ಕೊ, ಐಬಿಎಂನಂತಹ ಸಾಫ್ಟವೇರ್ ದೈತ್ಯ ಸಂಸ್ಥೆಗಳು ಮತ್ತು ಉದ್ದಿಮೆಗಳ ಸ್ಥಿತಿ ಇಂದು ಏನಾಗುತ್ತಿತ್ತು’ ಎಂದು ಪಟೇಲ್ ಪ್ರಶ್ನಿಸಿದ್ದಾರೆ.
‘ಭಾರತದ ಕರೆನ್ಸಿಯ (ರೂಪಾಯಿ) ಮೌಲ್ಯವನ್ನು ಮಾರುಕಟ್ಟೆ ನಿರ್ಧರಿಸಲಿದೆ. ರೂಪಾಯಿ ಮೌಲ್ಯದ ತೀವ್ರ ಏರಿಳಿತ ತಡೆಯುವುದು ಮಾತ್ರ ಆರ್ಬಿಐ ಕೆಲಸ’ ಎಂದು ಅವರು ಹೇಳಿದರು.