ಬೆಂಗಳೂರು: ‘ಈಶ್ವರಪ್ಪನವರು ನಡೆಸುತ್ತಿರುವ ಪಕ್ಷ ವಿರೋಧಿ ಚಟುವಟಿಕೆಗೆ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಕುಮ್ಮಕ್ಕು ನೀಡುತ್ತಿದ್ದಾರೆ’ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆರೋಪಿಸಿದರು.
ಗುರುವಾರ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿದ ಅವರು, ‘ಈ ಎಲ್ಲ ಬೆಳವಣಿಗೆಗೆ ಸಂತೋಷ್ ಅವರೇ ಕಾರಣ’ ಎಂದು ಇದೇ ಮೊದಲ ಬಾರಿಗೆ ಬಹಿರಂಗವಾಗಿ ಆರೋಪಿಸಿದರು.
‘ಸಂತೋಷ್ ಮತ್ತು ಅವರ ಶಿಷ್ಯರ ಚಟುವಟಿಕೆಗಳನ್ನು ಅಮಿತ್ ಷಾ ಅವರ ಗಮನಕ್ಕೆ ತರುತ್ತೇನೆ’ ಎಂದೂ ಯಡಿಯೂರಪ್ಪ ಹೇಳಿದರು.
‘ಪಕ್ಷದಲ್ಲಿರುವ ಅಸಮಾಧಾನ ಬಗೆಹರಿಸುವ ನಿಟ್ಟಿನಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿದ್ದೇವೆ. ಈಶ್ವರಪ್ಪ ನಾಲ್ಕು ಗೋಡೆಗಳ ಮಧ್ಯೆ ಚರ್ಚಿಸಬಹುದಿತ್ತು’ ಎಂದರು.
‘ರಾಜ್ಯ ಬಿಜೆಪಿ ಉಸ್ತುವಾರಿ ವಹಿಸಿರುವ ಮುರಳೀಧರ ರಾವ್ ಈಶ್ವರಪ್ಪ ಅವರಿಗೆ ಎಚ್ಚರಿಕೆ ನೀಡಿದ್ದಾರೆ. ಬ್ರಿಗೇಡ್ ಚಟುವಟಿಕೆ ನಡೆಸಬಾರದು ಎಂಬುದಾಗಿ ರಾಷ್ಟ್ರೀಯ ಅಧ್ಯಕ್ಷರು ಸೂಚಿಸಿದ್ದಾರೆ’ ಎಂದೂ ಹೇಳಿದರು.
‘ಅಸಮಾಧಾನದ ಬಗ್ಗೆ ಚರ್ಚೆ ಮಾಡಲು ಒಂದಷ್ಟು ಸಮಯ ಬೇಕಾಗುತ್ತದೆ. ಪಕ್ಷದ ನಾಯಕರ ಜತೆ ಸಮಾಲೋಚನೆ ನಡೆಸದೆ ಸಭೆ ಕರೆಯುವುದು ಹೇಗೆ’ ಎಂದು ಪ್ರಶ್ನಿಸಿದರು.
‘ಪಕ್ಷ ಸಂಘಟನೆ ಚಟುವಟಿಕೆ ಮುಂದುವರಿಸುತ್ತೇನೆ. ಈಶ್ವರಪ್ಪ ಉಂಟು ಮಾಡಿರುವ ಗೊಂದಲದಿಂದ ಕಾಂಗ್ರೆಸ್ಗೆ ಅನುಕೂಲವಾಗುತ್ತದೆ’ ಎಂದರು.