ಕಡ್ಡಾಯ ಹಿಂದಿ ಬಗ್ಗೆ ಶಿಕ್ಷಣ ಸಚಿವರ ಮಧ್ಯೆ ತೀವ್ರ ಭಿನ್ನಮತ
ನವದೆಹಲಿ, ಏ. 29– ವಿದ್ಯಾರ್ಥಿಯೊಬ್ಬನ ವಿದ್ಯಾರ್ಥಿ ದೆಸೆಯಲ್ಲಿ ಒಂದಲ್ಲ ಇನ್ನೊಂದು ಘಟ್ಟದಲ್ಲಿ ಹಿಂದಿಯನ್ನು ಕಡ್ಡಾಯಗೊಳಿಸಬೇಕೆ ಎಂಬ ವಿಚಾರದಲ್ಲಿ ರಾಜ್ಯ ಶಿಕ್ಷಣ ಸಚಿವರ ಸಮ್ಮೇಳನದಲ್ಲಿ ಇಂದು ತೀವ್ರ ಭಿನ್ನಾಭಿಪ್ರಾಯ ಕಂಡು ಬಂದಿತು.
ಗುಜರಾತ್, ಮಹಾರಾಷ್ಟ್ರ, ಅಸ್ಸಾಂ, ಮದರಾಸು, ಹರಿಯಾನ, ಬಿಹಾರ, ಒರಿಸ್ಸಾ, ಗೋವ ಮತ್ತು ಮಣಿಪುರ ರಾಜ್ಯಗಳ ನಡುವೆ ವಿಪರೀತ ವಿರೋಧಾಭಿಪ್ರಾಯವಿದ್ದಿತು.
ವಿವರಣೆ ನೀಡುವ ಹಕ್ಕು ಸುಪ್ರೀಂ ಕೋರ್ಟಿಗೆ ಸೇರಿದ್ದು ರಾಷ್ಟ್ರಪತಿಗಲ್ಲ
ನವದೆಹಲಿ, ಏ. 29– ರಾಜ್ಯಾಂಗಕ್ಕೆ ಅರ್ಥ ವಿವರಣೆ ನೀಡುವ ಹಕ್ಕು ‘ಸುಪ್ರೀಂ ಕೋರ್ಟಿಗೆ ಸೇರಿದ್ದೇ ಹೊರತು ಭಾರತದ ರಾಷ್ಟ್ರಪತಿಗಲ್ಲ’ ಎಂದು ಪಾರ್ಲಿಮೆಂಟ್ ಸದಸ್ಯ ಫಾಂಕ್ ಆಂಟನಿಯವರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ರಾಷ್ಟ್ರಪತಿ ತಮ್ಮ ವಿಚಾರದಲ್ಲೇ ತಾವು ತೀರ್ಮಾನ ನೀಡಬಹುದೆಂಬ’ ಪ್ರವೃತ್ತಿ ಬೆಳೆಸಿದರೆ ಅವರಿಂದ ಆಪಾಯ ಸಂಭವಿಸುವುದಲ್ಲದೆ ಪಾರ್ಲಿಮೆಂಟ್ ಸರ್ಕಾರದ ಮೂಲ ಕಲ್ಪನೆಯನ್ನು ನಾಶ ಮಾಡುವುದೆಂದು ಅವರು ಎಚ್ಚರಿಸಿದ್ದಾರೆ.
ಈ ವರ್ಷದಿಂದ ಪಿ.ಯು.ಸಿ.ಯಲ್ಲಿ ಐಚ್ಛಿಕವಾಗಿ ಕನ್ನಡ ಮಾಧ್ಯಮ: ಬೆಂಗಳೂರು ವಾರ್ಸಿಟಿ ಅಕೆಡಮಿಕ್ ಕೌನ್ಸಿಲ್
ಬೆಂಗಳೂರು, ಏ. 29– 1967–68ನೇ ಸಾಲಿನಿಂದ ಬೆಂಗಳೂರು ವಿಶ್ವವಿದ್ಯಾನಿಲಯದ ಪಿ.ಯು.ಸಿ. ಶಿಕ್ಷಣದಲ್ಲಿ ಕನ್ನಡ ಮಾಧ್ಯಮವನ್ನು ಐಚ್ಛಿಕವಾಗಿ ಜಾರಿಗೆ ತರಲು ಸಂಬಂಧಪಟ್ಟ ಪಠ್ಯಕ್ರಮವನ್ನು ನಿನ್ನೆ ಮತ್ತು ಇಂದು ನಡೆದ ವಿಶ್ವವಿದ್ಯಾನಿಲಯದ ಅಕೆಡಮಿಕ್ ಕೌನ್ಸಿಲ್ ಸರ್ವಾನುನತದಿಂದ ಅಂಗೀಕರಿಸಿದೆ.
ಪಿ.ಯು.ಸಿ.ಯಲ್ಲಿ ಕನ್ನಡ ಮಾಧ್ಯಮವನ್ನು ತೆಗೆದುಕೊಳ್ಳುವ ವಿದ್ಯಾರ್ಥಿಗಳಿಗೆ ಮುಂದಿನ ಉನ್ನತ ತರಗತಿಗಳಲ್ಲೂ ಕನ್ನಡ ಮಾಧ್ಯಮದ ಸೌಲಭ್ಯವನ್ನು ಒದಗಿಸುವ ಭರವಸೆಯನ್ನು ಅಕಡೆಮಿಕ್ ಕೌನ್ಸಿಲ್ ವ್ಯಕ್ತಪಡಿಸಿದೆ. ಅಕಾಡಮಿಕ್ ಕೌನ್ಸಿಲ್ನ ಈ ನಿರ್ಧಾರವನ್ನು ಉಪಕುಲಪತಿ ಪ್ರೊ. ವಿ.ಕೆ. ಗೋಕಾಕ್ ಅವರು ಇಂದು ವರದಿಗಾರರಿಗೆ ವಿವರಿಸಿದರು.
ಇಂಗ್ಲೆಂಡಿನಲ್ಲಿ ಭಾರತದ ಕ್ರಿಕೆಟ್ ಟೀಮಿಗೆ ಜಯ
ಲಂಡನ್, ಏ. 29– ಇಲ್ಲಿಯ ಉಪನಗರವಾದ ಓಸ್ಟರ್ಲಿಯಲ್ಲಿ ಇಂದು ನಡೆದ ಒಂದು ದಿನದ ಪಂದ್ಯದಲ್ಲಿ ಭಾರತ ಕ್ರಿಕೆಟ್ ಟೀಮು ಇಂಡಿಯನ್ ಜಮಖಾನ ಟೀಮನ್ನು 160 ರನ್ನುಗಳಿಂದ ಸೋಲಿಸಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.