ಬೆಂಗಳೂರು: ಮುಂಚೂಣಿ ಆಟಗಾರರಾದ ಡೇನಿಯಲ್ ಲಾಲಿಂಪುಯಿಯಾ, ಉದಾಂತ್ ಸಿಂಗ್ ಮತ್ತು ಮಿಡ್ಫೀಲ್ಡರ್ ಮಂದಾರ ದೇಸಾಯಿ ಅವರು ಶನಿವಾರ ಕಂಠೀರವ ಕ್ರೀಡಾಂಗಣದಲ್ಲಿ ಮೋಡಿ ಮಾಡಿದರು.
ಇವರ ಕಾಲ್ಚಳಕದಲ್ಲಿ ಅರಳಿದ ತಲಾ ಒಂದು ಗೋಲುಗಳ ಬಲದಿಂದ ಬೆಂಗಳೂರು ಫುಟ್ಬಾಲ್ ಕ್ಲಬ್ (ಬಿಎಫ್ಸಿ) ತಂಡ ಐ ಲೀಗ್ ಫುಟ್ಬಾಲ್ ಟೂರ್ನಿಯ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಗೆಲುವಿನ ಸಿಹಿ ಸವಿದಿದೆ. ಇದರೊಂದಿಗೆ ಬೆಂಗಳೂರಿನ ತಂಡ ಈ ಬಾರಿ ನಾಲ್ಕನೇ ಸ್ಥಾನದೊಂದಿಗೆ ಟೂರ್ನಿಯಲ್ಲಿ ಅಭಿಯಾನ ಮುಗಿಸಿದೆ.
2013ರಲ್ಲಿ ಐ ಲೀಗ್ಗೆ ಅಡಿ ಇಟ್ಟಿದ್ದ ಸುನಿಲ್ ಚೆಟ್ರಿ ಸಾರಥ್ಯದ ತಂಡ ಅದೇ ವರ್ಷ ಪ್ರಶಸ್ತಿ ಎತ್ತಿ ಹಿಡಿದ ಸಾಧನೆ ಮಾಡಿತ್ತು. ಮರು ವರ್ಷ (2014-15) ರನ್ನರ್ಸ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿದ್ದ ಚೆಟ್ರಿ ಬಳಗ ಅದೇ ವರ್ಷ ಫೆಡರೇಷನ್ ಕಪ್ ನಲ್ಲಿ ಪ್ರಶಸ್ತಿಗೆ ಮುತ್ತಿಕ್ಕಿತ್ತು. ಹೋದ ವರ್ಷ(2015–16) ಮತ್ತೆ ಐ ಲೀಗ್ ನಲ್ಲಿ ತಂಡ ದಿಂದ ಪ್ರಶಸ್ತಿಯ ಸಾಧನೆ ಮೂಡಿ ಬಂದಿತ್ತು.
ಈ ಬಾರಿಯೂ ತಂಡ ಉತ್ತಮ ಆರಂಭ ಪಡೆದಿತ್ತು. ಆದರೆ ನಂತರ ಸ್ಥಿರ ಸಾಮರ್ಥ್ಯ ಮೂಡಿಬಂದಿರಲಿಲ್ಲ. ಹೀಗಾಗಿ ಪ್ರಶಸ್ತಿ ಉಳಿಸಿಕೊಳ್ಳುವ ಕನಸು ಕೈಗೂಡಲಿಲ್ಲ. ತವರಿನ ಅಭಿಮಾನಿಗಳ ಬೆಂಬಲದೊಂದಿಗೆ ಕಣಕ್ಕಿಳಿದಿದ್ದ ಚೆಟ್ರಿ ಪಡೆ ಶುರುವಿನಿಂದಲೇ ಆಕ್ರಮಣಕಾರಿ ಆಟಕ್ಕೆ ಅಣಿಯಾಯಿತು. ಆತಿಥೇಯ ಆಟಗಾರರು ಪದೇ ಪದೇ ಎದುರಾಳಿ ಆವರಣ ಪ್ರವೇಶಿಸುವ ತಂತ್ರ ಅನು ಸರಿಸಿದರು.
ಚೆಟ್ರಿ ಪಡೆಯ ಈ ಯೋಜನೆಗೆ ಐದನೇ ನಿಮಿಷದಲ್ಲಿ ಫಲ ಸಿಕ್ಕಿತು. ಲೆನ್ನಿ ರಾಡ್ರಿಗಸ್ ಚೆಂಡನ್ನು ಡ್ರಿಬಲ್ ಮಾಡುತ್ತಾ ಆವರಣ ಪ್ರವೇಶಿಸುವುದನ್ನು ತಡೆಯಲು ಚರ್ಚಿಲ್ ಆಟಗಾರರು ಮುಂದಾದರು. ಕೂಡಲೇ ಲೆನ್ನಿ, ಚೆಂಡನ್ನು ಡೇನಿಯಲ್ ಲಾಲಿಂಪುಯಿ ಯಾ ಅವರತ್ತ ಒದ್ದರು. ಅದನ್ನು ತಡೆದ ಡೇನಿಯಲ್ ಕ್ಷಣಾರ್ಧ ದಲ್ಲಿ ಎದುರಾಳಿ ಗೋಲು ಪೆಟ್ಟಿಗೆ ಯೊಳಗೆ ಸೇರಿಸಿದಾಗ ಅಂಗಳದಲ್ಲಿ ಸಂಭ್ರಮ ಮೇಳೈಸಿತು. ಆ ನಂತರ ಚರ್ಚಿಲ್ ತಂಡ ಸಮಬಲದ ಗೋಲು ಗಳಿಸಲು ಪ್ರಯತ್ನ ಮುಂದುವರಿಸಿತು.
ಎದುರಾಳಿಗಳ ಎಲ್ಲಾ ಅವಕಾಶಗಳನ್ನು ಬಿಎಫ್ಸಿ ರಕ್ಷಣಾ ವಿಭಾಗದ ಆಟ ಗಾರರು ವಿಫಲ ಗೊಳಿಸಿದರು. ಹೀಗಾಗಿ 35ನೇ ನಿಮಿಷ ದವರೆಗೂ ಬೆಂಗ ಳೂರಿನ ತಂಡ ಮುನ್ನಡೆ ಕಾಯ್ದು ಕೊಂಡಿತ್ತು.36ನೇ ನಿಮಿಷದಲ್ಲಿ ಉದಾಂತ್ ಸಿಂಗ್ ಮೋಡಿ ಮಾಡಿದರು.
ಅವರು 30 ಗಜ ದೂರದಿಂದ ಒದ್ದ ಚೆಂಡು ಎದು ರಾಳಿ ಗೋಲ್ಕೀಪರ್ ಅನ್ನು ವಂಚಿಸಿ ಗುರಿ ಮುಟ್ಟಿದಾಗ ಬಿಎಫ್ಸಿ ಪಾಳಯದಲ್ಲಿ ಸಂತಸದ ಹೊನಲು ಹರಿಯಿತು. ಹೀಗಾಗಿ ತಂಡ 2–0ರ ಮುನ್ನಡೆ ಯೊಂದಿಗೆ ವಿರಾಮಕ್ಕೆ ಹೋಯಿತು.
ವಿರಾಮದ ಬಳಿಕವೂ ಬಿಎಫ್ಸಿ ಪಾರಮ್ಯ ಮುಂದುವರಿಯಿತು. 74ನೇ ನಿಮಿಷದಲ್ಲಿ ಮಂದಾರ ದೇಸಾಯಿ ಗೋಲು ದಾಖಲಿಸಿ ತವರಿನ ತಂಡ ಸಂಭ್ರಮದ ಹೊ ಳೆಯಲ್ಲಿ ಮಿಂದೇಳುವಂತೆ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.