ವಿಜಯಪುರ: ನಮ್ಮ ಧರ್ಮ, ಸಂಸ್ಕೃತಿ, ಪರಂಪರೆ ಉಳಿಸುವ ಕಾರ್ಯದಲ್ಲಿ ಯುವಜನರ ಪಾತ್ರ ಮಹತ್ತರವಾದದ್ದು ಆದ್ದರಿಂದ ಯುವಜನರನ್ನು ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಗಡ್ಡದನಾಯಕನಹಳ್ಳಿ ದುರ್ಗಾ ಮಹೇಶ್ವರಿ ದೇವಾಲಯದ ಪ್ರಧಾನ ಅರ್ಚಕ ನಾಗರಾಜಪ್ಪ ಸ್ವಾಮಿ ಹೇಳಿದರು.
ವಿಜಯಪುರದ ಎಲ್ಲಮ್ಮ ದೇವಾಲಯದ ಆವರಣದಲ್ಲಿ ರೇಣುಕಾ ಎಲ್ಲಮ್ಮದೇವಿ ಭಕ್ತಮಂಡಳಿ, ಪಾರ್ಥಸಾರಥಿ ಸೇವಾ ಸಮಿತಿಯವರ ಸಹಯೋಗದಲ್ಲಿ ಆಯೋಜನೆ ಮಾಡಲಾಗಿದ್ದ 78 ನೇ ವರ್ಷದ ಕರಗ ಮಹೋತ್ಸವದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಮಾಜವು ಆರೋಗ್ಯಕರವಾಗಿ ಏಳಿಗೆಯಾಗಬೇಕಾದರೆ, ದಾನ, ಧರ್ಮಗಳು, ನಡೆಯಬೇಕು. ಹಿರಿಯರ ಕಾಲದಿಂದಲೂ ನಡೆದುಕೊಂಡು ಬಂದಿರುವ ಆಚಾರ ವಿಚಾರಗಳು ಯುವಪೀಳಿಗೆಗೆ ಪರಿಚಯ ಮಾಡಬೇಕು ಎಂದರು.
ಜೆಡಿಎಸ್ ಮುಖಂಡ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ, ನಮ್ಮ ಸುತ್ತಮುತ್ತಲಿನ ದೇವಾಲಯಗಳನ್ನು ಜೀರ್ಣೋದ್ಧಾರಗೊಳಿಸಬೇಕು. ನೀತಿ, ನ್ಯಾಯ, ಧರ್ಮಗಳು ಸ್ವಲ್ಪ ಮಟ್ಟಿಗೆ ಉಳಿದಿರುವುದರಿಂದಲೇ ಅಲ್ಪಸ್ವಲ್ಪ ಮಳೆಯಾಗುತ್ತಿದೆ ಎಂದರು.
ಸನ್ನಿಧಿ ಪ್ರತಿಷ್ಠಾನದ ಸಂಸ್ಥಾಪಕ ಶ್ರೀನಿವಾಸ್ ಎಂ. ಸನ್ನಿಧಿ ಮಾತನಾಡಿ, ಧಾರ್ಮಿಕವಾದ ಕಾರ್ಯಕ್ರಮಗಳ ಜೊತೆಯಲ್ಲೆ ಮುಂದಿನ ಪೀಳಿಗೆಗೆ ಉತ್ತಮ ಸಮಾಜವನ್ನು ನಿರ್ಮಾಣ ಮಾಡಿಕೊಡಬೇಕಾದಂತಹ ದೊಡ್ಡಹೊಣೆಗಾರಿಕೆ ಪ್ರತಿಯೊಬ್ಬ ನಾಗರಿಕರ ಮೇಲಿದೆ ಎಂದರು.
ಪಾರ್ಥಸಾರಥಿ ಸೇವಾ ಸಮಿತಿಯ ಅಧ್ಯಕ್ಷ ಟಿ.ಎಸ್.ವಿಜಯಕುಮಾರ್, ಪಿ.ಮುನಿಯಪ್ಪ, ಭಾರತದ ಪೂಜಾರಿ ಮುನಿಶಾಮಪ್ಪ, ಪುರಸಭಾ ಸದಸ್ಯ ಜೆ.ಎನ್.ಶ್ರೀನಿವಾಸ್, ಹನುಮಂತಪ್ಪ, ಎನ್.ರಾಜಗೋಪಾಲ್, ಕೆ.ರಾಮಯ್ಯ, ನಾರಾಯಣಸ್ವಾಮಿ, ಕೆ.ಮುನಿರಾಜು, ಯಲಿಯೂರು ನಾರಾಯಣಸ್ವಾಮಿ, ಜೆ.ಸಿ.ಸುಬ್ಬಣ್ಣ, ಚಿನ್ನಪ್ಪ, ಜಿ.ಎಂ. ಚಂದ್ರು, ಹನೀಪ್, ಕೆ.ಸುರೇಶ್, ಬೆಳ್ತೂರು ಯಲ್ಲಪ್ಪ, ಡಿ.ಎಂ.ಮುನೀಂದ್ರ, ಮುಂತಾದವರು ಹಾಜರಿದ್ದರು.