ದೊಡ್ಡಬಳ್ಳಾಪುರ: ಆಧುನಿಕ ಮಾಧ್ಯಮಗಳ ಭರಾಟೆಯಲ್ಲೂ ರಂಗಭೂಮಿ ಇಂದಿಗೂ ಜೀವಂತವಾಗಿದೆ ಎಂದು ಚಿತ್ರ ನಿರ್ದೇಶಕ, ಸಾಹಿತಿ ಟಿ.ಎನ್.ಸೀತಾರಾಂ ಹೇಳಿದರು.
ಅವರು ತಾಲ್ಲೂಕಿನ ತಳಗವಾರ ಗ್ರಾಮದಲ್ಲಿ ರಾಮಾಂಜಿನೇಯ ಕೃಪಾಪೋಷಿತ ನಾಟಕ ಮಂಡಳಿ ವತಿಯಿಂದ ನಡೆದ ಕುರುಕ್ಷೇತ್ರ ಪೌರಾಣಿಕ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.
ರಂಗಭೂಮಿಯಲ್ಲಿ ಯಶಸ್ವಿಯಾದ ಕಲಾವಿದರು ಎಲ್ಲ ಮಾಧ್ಯಮಗಳಲ್ಲೂ ಉತ್ತಮ ಕಲಾವಿದರಾಗುತ್ತಾರೆ. ಇಡೀ ರಾತ್ರಿ ಜನ ಕುಳಿತು ನಾಟಕ ನೋಡುವ ಮೂಲಕ ಕಲಾವಿದರನ್ನು ಪ್ರೋತ್ಸಾಹಿಸುತ್ತ ಬಂದಿದ್ದಾರೆ. ಪೌರಾಣಿಕ ನಾಟಕಗಳಲ್ಲಿ ಯುವ ಕಲಾವಿದರು ಆಸಕ್ತಿಯಿಂದ ಭಾಗವಹಿಸುತ್ತಿರುವುದು ಪೌರಾಣಿಕ ನಾಟಕ ಕಲೆಯ ಬೆಳೆವಣಿಗೆಯ ಸಂಕೇತವಾಗಿದೆ ಎಂದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ರಂಗ ಭೂಮಿ ಕಲಾವಿದರ ಸಂಘದ ಗೌರವ ಅಧ್ಯಕ್ಷ ಕೆ.ಎಂ.ಕೃಷ್ಣಮೂರ್ತಿ, ಬೆಂಗಳೂರು ಉಪಮೇಯರ್ ಆನಂದ್, ಮಾಜಿ ಶಾಸಕ ವಿ.ಕೃಷ್ಣಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ಡಿ. ಸತ್ಯನಾರಾಯಣಗೌಡ, ಟಿಎಪಿಎಂಸಿಎಸ್ ಮಾಜಿ ಅಧ್ಯಕ್ಷ ಟಿ.ವಿ.ಲಕ್ಷ್ಮೀನಾರಾಯಣ್ ಮತ್ತಿತರರು ಭಾಗವಹಿಸಿದ್ದರು.