ಗೋಣಿಕೊಪ್ಪಲು: ‘ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಸಂಶೋಧನೆ, ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಒತ್ತು ನೀಡಬೇಕು’ ಎಂದು ತೆಲಂಗಾಣ ಭಂಡಾರಿ ಶ್ರೀನಿವಾಸ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ವಿ. ಎನ್. ಗಿರಿಧರ ಅಕುಲ ಹೇಳಿದರು.
ಪೊನ್ನಂಪೇಟೆ ಹಳ್ಳಿಗಟ್ಟು ಕೂರ್ಗ್ ತಾಂತ್ರಿಕ ಕಾಲೇಜಿನಲ್ಲಿ ಎರಡು ದಿನಗಳ ವಿಜ್ಞಾನ ಮತ್ತು ತಾಂತ್ರಿಕ ವಿಭಾಗದ ಅಂತರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಗುರುವಾರ ಮಾತನಾಡಿದರು.
‘ತಾಂತ್ರಿಕ ವಿದ್ಯಾಲಯಗಳು ವಿದ್ಯಾರ್ಥಿಗಳಲ್ಲಿ ಸಂಶೋಧನಾ ಆಸಕ್ತಿ ಬೆಳೆಸಬೇಕು. ವ್ಯಕ್ತಿತ್ವದ ಬೆಳವಣಿಗೆಗೆ ಒತ್ತು ನೀಡಬೇಕು. ಆ ಮೂಲಕ ತಾಂತ್ರಿಕ ವಿಭಾಗದಲ್ಲಿ ನೂತನ ಆವಿಷ್ಕಾರ ಅಳವಡಿಸಿಕೊಳ್ಳಬಹುದು’ ಎಂದರು.
ಕೊಡವ ಎಜುಕೇಶನ್ ಸೊಸೈಟಿ ನಿರ್ದೇಶಕಿ ಡಾ.ಜಮ್ಮಡ ಪೊನ್ನಮ್ಮ ಮಾಚಯ್ಯ, ‘ಇಂದಿನ ತಾಂತ್ರಿಕ ಬೆಳ ವಣಿಗೆ ಗಮನಿಸಿದರೆ ಮುಂದಿನ 5 ವರ್ಷಗಳಲ್ಲಿ ಶೇ 22ರಷ್ಟು ತಾಂತ್ರಿಕ ವಿಭಾಗದ ಪರಿಣಿತರು ಉದ್ಯೋಗ ಪಡೆಯಲಿದ್ದಾರೆ.
ನ್ಯಾನೋ ಟೆಕ್ನಾಲಜಿ ಹಲವಾರು ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದೆ. ಮುಂದೆ ಮತ್ತಷ್ಟು ಪ್ರಗತಿ ಕಾಣುವುದರ ಜತೆಗೆ ಪರಿಸರಕ್ಕೆ ಹಾನಿಯಾಗದಂತೆ ಎಚ್ಚರ ವಹಿಸಬೇಕು ಎಂದು ಅವರು ನುಡಿದರು.
ವಿವಿಧ ರಾಜ್ಯಗಳಿಂದ 28 ಸಂಶೋ ಧಕರು, ಎನ್ಐಐಟಿ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ 8 ಸಂಶೋಧಕರ ವಿನೂತನ ತಂತ್ರಜ್ಞಾನ ಕುರಿತು ವಿಷಯ ಮಂಡಿಸಿದರು.
ಕಾರ್ಯಕ್ರಮದಲ್ಲಿ ಕೊಡವ ಎಜುಕೇಶನ್ ಸೊಸೈಟಿ ಅಧ್ಯಕ್ಷ ಸಿ.ಪಿ.ಬೆಳ್ಯಪ್ಪ, ಕಾರ್ಯದರ್ಶಿ ರಾಕೇಶ್ ಪೂವಯ್ಯ, ಸಹಕಾರ್ಯದರ್ಶಿ ಚಿರಿಯ ಪಂಡ ರಾಜಾ ನಂಜಪ್ಪ, ಪ್ರಾಂಶುಪಾಲ ಡಾ.ಮಹಾಬಲೇಶ್ವರಪ್ಪ, ಸಂಚಾಲಕ ನಂಜನ್ ಬಿದ್ದಪ್ಪ, ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಕೆ.ಎಸ್.ಸುಬ್ಬಯ್ಯ ಹಾಜರಿದ್ದರು.