ಹೊಸಕೋಟೆ: ರಾಷ್ಟ್ರೀಯ ಹೆದ್ದಾರಿ– 207ರ ವೆಂಕಟಾಪುರ ಗೇಟ್ ಬಳಿ ಸಂಭವಿಸಿದ ಅಪಘಾತದಿಂದಾಗಿ ರಕ್ತಚಂದನ ಸಾಗಣೆ ಜಾಲ ಪತ್ತೆಯಾಗಿದೆ.
ಶನಿವಾರ ಬೆಳಿಗ್ಗೆ ಚಾಲಕನ ನಿಯಂತ್ರಣ ತಪ್ಪಿದ್ದ ಕ್ವಾಲೀಸ್ ಕಾರು ರಸ್ತೆಯಲ್ಲೇ ಉರುಳಿಬಿದ್ದಿತ್ತು. ಪರಿಣಾಮ ಕೆಲ ಹೊತ್ತು ದಟ್ಟಣೆ ಉಂಟಾಗಿತ್ತು.
ಸ್ಥಳಕ್ಕೆ ಬಂದ ಪೊಲೀಸರು ವಾಹನ ಸ್ಥಳಾಂತರಕ್ಕೆ ಕ್ರಮ ಕೈಗೊಂಡಿದ್ದರು. ಈ ವೇಳೆಯೇ ಕಾರಿನಲ್ಲಿ ₹11 ಲಕ್ಷ ಮೌಲ್ಯದ ರಕ್ತಚಂದನ ಪತ್ತೆಯಾಗಿತ್ತು. ಅದನ್ನು ಪೊಲೀಸರು ಜಪ್ತಿ ಮಾಡಿದರು.
‘ಅಪಘಾತದ ಬಳಿಕ ಕಾರು ಬಿಟ್ಟು ಆರೋಪಿಗಳು ಪರಾರಿಯಾಗಿದ್ದಾರೆ. ಪಶ್ಚಿಮ ಬಂಗಾಳದ ನೋಂದಣಿ ಸಂಖ್ಯೆ ಈ ಕಾರಿಗಿದೆ. ಅದರ ಆಧಾರದಲ್ಲಿ ಆರೋಪಿಗಳನ್ನು ಪತ್ತೆ ಮಾಡುತ್ತಿದ್ದೇವೆ’ ಎಂದು ಪೊಲೀಸರು ತಿಳಿಸಿದರು.