ತರೀಕೆರೆ: ‘ಕಾರ್ಮಿಕರು ತಮ್ಮ ಹಕ್ಕು ಮತ್ತು ಕಾಯ್ದೆಗಳ ಬಗ್ಗೆ ಸರಿಯಾಗಿ ಅರಿತುಕೊಳ್ಳಬೇಕು’ ಎಂದು ಸಿವಿಲ್ ನ್ಯಾಯಾಧೀಶ ಗಂಗಾಧರ್ ಹೇಳಿದರು. ಪಟ್ಟಣದಲ್ಲಿ ವಕೀಲರ ಸಂಘ, ಉಚಿತ ಕಾನೂನು ಸೇವಾ ಸಮಿತಿ ಆಶ್ರಯದಲ್ಲಿ ಈಚೆಗೆ ಆಯೋಜಿಸಲಾಗಿದ್ದ ವಿಶ್ವ ಕಾರ್ಮಿಕರ ದಿನಾಚರಣೆಯಲ್ಲಿ ಅವರು ಮಾತನಾಡಿದರು.
‘₹ 1 ಲಕ್ಷಕ್ಕಿಂತ ಕಡಿಮೆ ವಾರ್ಷಿಕ ಆದಾಯವಿರುವ ಎಲ್ಲರಿಗೂ ಉಚಿತ ಕಾನೂನು ನೆರವು ದೊರಕಿಸಿಕೊಡುವ ಉದ್ದೇಶವನ್ನು ಕಾನೂನು ಸೇವಾ ಪ್ರಾಧಿಕಾರ ಹೊಂದಿದೆ. ಇದರ ಉಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು. ನ್ಯಾಯಾಲಯದಲ್ಲಿ ಕಾರ್ಮಿಕರಿಗಾಗಿ ದೂರು ಪೆಟ್ಟಿಗೆ ಇಡಲಾಗಿದೆ’ ಎಂದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಯತಿರಾಜ್ ಮಾತನಾಡಿ ‘ಜಿಲ್ಲೆಯ ಲ್ಲಿಯೇ ಅತ್ಯಂತ ಹೆಚ್ಚು, 5,945 ಕಟ್ಟಡ ಕಾರ್ಮಿಕರು ತಾಲ್ಲೂಕಿನಲ್ಲಿದ್ದಾರೆ. ಅವರಿಗೆ ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ದೊರಕಿಸಿಕೊಡಲು ಪ್ರಯತ್ನಿಸಲಾಗಿದೆ’ ಎಂದರು.
ಈ ಸಂದರ್ಭ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿ ಕಾರಿ ಗಂಗಾಧರ ಮೂರ್ತಿ, ಹೆಚ್ಚುವರಿ ಸರ್ಕಾರಿ ವಕೀಲ ಎಸ್.ಸುರೇಶ್ಚಂದ್ರ, ಕಡೂರು ಕಾರ್ಮಿಕ ಇಲಾಖಾಧಿಕಾರಿ ಶಶಿಕಲಾ ಇದ್ದರು.