ವಿಜಯಪುರ: ಬೆಳಗಾವಿ ವಿಭಾಗದ ಎಐಸಿಸಿ ವೀಕ್ಷಕ ಮಣಿಕಂ ಠ್ಯಾಗೋರ್ ಇದೇ 15ರ ಸೋಮವಾರ ಪಕ್ಷದ ಸಂಘಟನೆಗಾಗಿ ಜಿಲ್ಲೆಯಲ್ಲಿ ಸಭೆ ನಡೆಸಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರವಿಗೌಡ ಪಾಟೀಲ ತಿಳಿಸಿದರು.
ಪಕ್ಷದ ಮುಖಂಡರು, ಕಾರ್ಯಕರ್ತರು, ಶಾಸಕರು, ಹಾಲಿ–ಮಾಜಿ ಜನಪ್ರತಿನಿಧಿಗಳು ಸೇರಿದಂತೆ ವಿವಿಧ ಅಂಗ ಘಟಕಗಳ ಪದಾಧಿಕಾರಿಗಳಿಂದ ವೀಕ್ಷಕರು ಅಭಿಪ್ರಾಯ ಸಂಗ್ರಹಿಸಲಿದ್ದಾರೆ ಎಂದು ಶನಿವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಈ ಸಭೆಗೆ ಪಕ್ಷ ಪ್ರತಿನಿಧಿಸುವ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಕಡ್ಡಾಯವಾಗಿ ಹಾಜರಾಗಬೇಕು ಎಂದು ಸೂಚನೆ ನೀಡಲಾಗಿದೆ. ಎಲ್ಲ ಶಾಸಕರಿಗೆ ವೈಯಕ್ತಿಕವಾಗಿ ಸಭೆಯಲ್ಲಿ ಪಾಲ್ಗೊಳ್ಳುವಂತೆ ಮನವಿಯನ್ನು ಮಾಡಿಕೊಳ್ಳಲಾಗಿದೆ ಎಂದರು.
‘ಮುಂಬರುವ ವಿಧಾನಸಭಾ ಚುನಾವಣೆಗೆ ಸಿದ್ಧತೆ ನಡೆಸುವಂತೆ ಕೆಪಿಸಿಸಿ ಈಗಾಗಲೇ ಜಿಲ್ಲಾ ಘಟಕಕ್ಕೆ ಸೂಚನೆ ರವಾನಿಸಿದೆ. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಇದೇ 22ರಿಂದ 26ರವರೆಗೆ ಎಲ್ಲ ಜಿಲ್ಲಾ ಕಾಂಗ್ರೆಸ್ ಘಟಕಗಳ ಸಭೆ ನಡೆಸಲಿದ್ದಾರೆ.
ಈ ಸಭೆಯಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ ಸಿದ್ಧತೆ, ಮಾಹಿತಿ ಕುರಿತಂತೆ ಚರ್ಚೆಯಾಗಲಿದೆ. ಬ್ಲಾಕ್ ಕಾಂಗ್ರೆಸ್ ಸಮಿತಿ, ಜಿಲ್ಲಾ ಕಾಂಗ್ರೆಸ್ ಸಮಿತಿ, ಕಾರ್ಯಕರ್ತರ ಅಭಿಪ್ರಾಯವನ್ನು ನಮ್ಮ ಜಿಲ್ಲಾ ಸಭೆ ಆಯೋಜನೆಗೊಂಡಾಗ ಮಂಡಿಸಲಾಗುವುದು’ ಎಂದು ರವಿಗೌಡ ತಿಳಿಸಿದರು.
ದೂರು ಬಂದರೆ ವರದಿ: ನಗರ ಶಾಸಕ ಡಾ.ಮಕ್ಬೂಲ್ ಬಾಗವಾನ ವಿರುದ್ಧದ ದೂರುಗಳಿಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ರವಿಗೌಡ ಪಾಟೀಲ ‘ಈವರೆಗೂ ಜಿಲ್ಲಾ ಘಟಕಕ್ಕೆ ನಗರ ಶಾಸಕರ ವಿರುದ್ಧ ಯಾವುದೇ ದೂರು ಬಂದಿಲ್ಲ’ ಎಂದರು.
‘ಒಂದು ವೇಳೆ ಅಸಮರ್ಥತೆ ಕುರಿತ ದೂರು ದಾಖಲಾದರೆ ಕೆಪಿಸಿಸಿ ಅಧ್ಯಕ್ಷರಿಗೆ, ರಾಜ್ಯ ವರಿಷ್ಠರಿಗೆ ಮಾಹಿತಿ ನೀಡುವೆ. ಇದೇ ರೀತಿ ಈಗಾಗಲೇ ದೇವರ ಹಿಪ್ಪರಗಿ ಶಾಸಕರ ಪಕ್ಷ ವಿರೋಧಿ ನಡೆಯ ದಾಖಲಾತಿಗಳನ್ನೂ ಕೆಪಿಸಿಸಿಗೆ ಸಲ್ಲಿಸಿರುವೆ’ ಎಂದು ಅವರು ತಿಳಿಸಿದರು.