ವಿಜಯಪುರ: ಜನಾಕ್ರೋಶಕ್ಕೆ ವಿಜಯಪುರ ಮಹಾನಗರ ಪಾಲಿಕೆ ಆಡಳಿತ ಮಣಿದಿದೆ. ಕಾರ್ಪೋರೇಟರ್ಗಳ ಸರ್ವಾನುಮತದ ನಿರ್ಣಯ ಅಂಗೀಕಾರದಿಂದ ನಗರದ ಜನನಿಬಿಡ ರಸ್ತೆಗಳಲ್ಲಿ ವಸೂಲಾಗುತ್ತಿದ್ದ ವಾಹನ ಪಾರ್ಕಿಂಗ್ ಶುಲ್ಕ ರದ್ದುಗೊಂಡಿದೆ.
ಮಹಾತ್ಮಗಾಂಧಿ ರಸ್ತೆ, ಸಿದ್ಧೇಶ್ವರ ಗುಡಿ ರಸ್ತೆ ನಗರದ ಪ್ರಮುಖ ರಸ್ತೆಗಳು. ಬಹುತೇಕ ವಹಿವಾಟು ನಡೆಯುವುದು ಈ ಭಾಗದಲ್ಲೇ. ಬಹುಪಾಲು ಜನರು ತಮ್ಮ ಖಾಸಗಿ ವಾಹನಗಳಲ್ಲಿ ಈ ಕೇಂದ್ರ ಭಾಗಕ್ಕೆ ಭೇಟಿ ನೀಡಿ ವಿವಿಧ ಬಜಾರ್ಗೆ ತೆರಳಿ ಖರೀದಿ ಪ್ರಕ್ರಿಯೆ ನಡೆಸುತ್ತಿತ್ತು. ವೈಯಕ್ತಿಕ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಿತ್ತು.
ನಿತ್ಯ ಸಹಸ್ರ, ಸಹಸ್ರ ಸಂಖ್ಯೆಯ ಜನ ಈ ಎರಡೂ ರಸ್ತೆ ಆಜುಬಾಜು ವಾಹನ ನಿಲುಗಡೆ ಮಾಡುತ್ತಿದ್ದರು. ಈ ಎರಡೂ ರಸ್ತೆಗಳನ್ನು ಈಚೆಗಷ್ಟೇ ಮಾಸ್ಟರ್ ಪ್ಲ್ಯಾನ್ನಡಿ ಅಭಿವೃದ್ಧಿಗೊಳಿಸಲಾಗಿತ್ತು. ಈ ಯೋಜನೆಯಡಿ ಲಭ್ಯವಿರುವ ಅವಕಾಶ ಬಳಸಿಕೊಂಡು, ಪಾಲಿಕೆಯ ಸಿಬ್ಬಂದಿ ವರ್ಗ ಏಕಾಏಕಿ ಪಾರ್ಕಿಂಗ್ ಶುಲ್ಕ ವಸೂಲಿಗೆ ಟೆಂಡರ್ ಮೂಲಕ ಅನುಮತಿ ನೀಡಿತ್ತು.
ತೆರಿಗೆ ಸ್ಥಾಯಿ ಸಮಿತಿ ಸೇರಿದಂತೆ, ಪಾಲಿಕೆಯ ಸಾಮಾನ್ಯ ಸಭೆಯ ಗಮನಕ್ಕೂ ತಾರದೆ ಶುಲ್ಕ ವಸೂಲಿಗೆ ಅನುಮತಿ ನೀಡಲಾಗಿತ್ತು. ಗುತ್ತಿಗೆ ಪಡೆದ ಟೆಂಡರ್ದಾರರು ಸಾರ್ವಜನಿಕರ ಮನವೊಲಿಸಿ ಪಾರ್ಕಿಂಗ್ ಶುಲ್ಕ ವಸೂಲಿ ಮಾಡುವ ಬದಲು, ಅತ್ಯಂತ ಕೆಟ್ಟ ನಡವಳಿಕೆ ಪ್ರದರ್ಶಿಸುತ್ತಿದ್ದುದು ನಾಗರಿಕರ ಕೆಂಗಣಿಗೆ ಗುರಿಯಾಗಿತ್ತು.
ಪಾಲಿಕೆಯ ಈ ನಿರ್ಧಾರ ಖಂಡಿಸಿ ಹಲ ಸಂಘಟನೆಗಳು ಬೀದಿಗಿಳಿದು ಪ್ರತಿಭಟಿಸಿದ್ದವು. ಸಾರ್ವಜನಿಕರು ಸಹ ಪಾಲಿಕೆಯ ಕಾರ್ಪೋರೇಟರ್ಗಳ ಬಳಿ ತಮ್ಮ ಅಸಮಾಧಾನ ದಾಖಲಿಸಿದ್ದರು. ಇದರ ಪರಿಣಾಮ ಇದೇ 11ರ ಗುರುವಾರ ನಡೆದ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದ ನಿರ್ಣಯ ಅಂಗೀಕರಿಸುವ ಮೂಲಕ ಪಾಲಿಕೆ ಆಡಳಿತ ಶುಲ್ಕ ವಸೂಲಿ ರದ್ದುಗೊಳಿಸಲಾಗಿದೆ.
ನಿರ್ಣಯ ಅಂಗೀಕಾರಗೊಳ್ಳುತ್ತಿದ್ದಂತೆ ಜನತೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ. ಗುತ್ತಿಗೆದಾರರು ಸಹ ಶುಲ್ಕ ವಸೂಲಿಗೆ ಮುಂದಾಗುತ್ತಿಲ್ಲ ಎಂದು ಎರಡೂ ರಸ್ತೆಯ ವ್ಯಾಪಾರಿಗಳು ತಿಳಿಸಿದರು.
ಅನುಕೂಲಕ್ಕಾಗಿ ಟೆಂಡರ್’: ಮಾಸ್ಟರ್ ಪ್ಲ್ಯಾನ್ನಡಿ ರಸ್ತೆ ಅಭಿವೃದ್ಧಿಗೊಳಿಸಿದರೆ, ಆ ರಸ್ತೆ ಬದಿ ವಾಹನ ಪಾರ್ಕಿಂಗ್ ಶುಲ್ಕ ವಸೂಲಿ ಮಾಡಬಹುದು. ಇದು ಯೋಜನೆಯಲ್ಲಿಯೇ ಪ್ರಸ್ತಾಪಗೊಂಡಿರುತ್ತದೆ.
ನಗರದಲ್ಲಿ ರಸ್ತೆ ಅಭಿವೃದ್ಧಿ ಇನ್ನೂ ಪೂರ್ಣ ಪ್ರಮಾಣದಲ್ಲಿ ನಡೆದಿಲ್ಲ. ಮಹಾತ್ಮಗಾಂಧಿ ರಸ್ತೆ, ಸಿದ್ಧೇಶ್ವರ ರಸ್ತೆಯ ಅಭಿವೃದ್ಧಿ ಕಾಮಗಾರಿ ಸಹ ಸಂಪೂರ್ಣಗೊಂಡಿಲ್ಲ. ಇದರ ನಡುವೆಯೇ ನಗರ ಶಾಸಕರ ಬೆಂಬಲಿಗ ಮಹಾನಗರ ಪಾಲಿಕೆಯ ಸದಸ್ಯರೊಬ್ಬರಿಗೆ ಅನುಕೂಲ ಮಾಡಿಕೊಡುವ ಕಾರಣದಿಂದಲೇ ಏಕಾಏಕಿ ಪಾರ್ಕಿಂಗ್ ಶುಲ್ಕ ವಸೂಲಿಗೆ ಟೆಂಡರ್ ನಡೆಸಿ ಅನುಮತಿ ನೀಡಲಾಗಿತ್ತು.
ಟೆಂಡರ್ ನಡೆಸುವ ಸಂದರ್ಭವೂ ಸಹ ಪಾರದರ್ಶಕವಾಗಿಲ್ಲ. ಬಿಡ್ನಲ್ಲಿ ಪಾಲ್ಗೊಂಡವರನ್ನು ಹಿಂದೆ ಸರಿಸಲಾಗಿದೆ. ಪಾಲಿಕೆಯ ಕೆಲ ಅಧಿಕಾರಿಗಳು ಸೇರಿಕೊಂಡು ‘ರಿಂಗ್’ ಮಾಡಿ ಸದಸ್ಯನಿಗೆ ಅನುಕೂಲ ಮಾಡಿಕೊಟ್ಟಿದ್ದರು’ ಎಂಬ ದೂರು ವ್ಯಾಪಕ ಪ್ರಮಾಣದಲ್ಲಿ ಕೇಳಿ ಬಂದಿತ್ತು. ಈ ಸಂಬಂಧ ‘ಪ್ರಜಾವಾಣಿ’ ವಿಶೇಷ ವರದಿಯನ್ನು ಪ್ರಕಟಿಸಿದ್ದು ಇಲ್ಲಿ ಉಲ್ಲೇಖನಾರ್ಹ.
ಸ್ವಾಗತಾರ್ಹ: ‘ವಿಜಯಪುರ ಬೃಹತ್ ನಗರವಲ್ಲ. ಎರಡೂ ರಸ್ತೆಗಳಲ್ಲಿ ಯಾವುದೇ ಮೂಲ ಸೌಕರ್ಯಗಳಿಲ್ಲದಿದ್ದರೂ ಪೇ ಪಾರ್ಕಿಂಗ್ ವ್ಯವಸ್ಥೆ ಆರಂಭಿಸಿದ್ದಕ್ಕೆ ಮೊದಲಿನಿಂದಲೂ ತೀವ್ರ ವಿರೋಧ ವ್ಯಕ್ತವಾಗಿತ್ತು.
ಇದೀಗ ಸಾರ್ವಜನಿಕರ ನಿಲುವಿಗೆ ಮನ್ನಣೆ ನೀಡಿರುವುದು ಸ್ವಾಗತಾರ್ಹ. ಪಾರ್ಕಿಂಗ್ ಶುಲ್ಕ ರದ್ದುಗೊಳಿಸಿದ್ದಕ್ಕೆ ಮಹಾನಗರ ಪಾಲಿಕೆಯ ಜನಪ್ರತಿನಿಧಿಗಳಿಗೆ ಅಭಿನಂದನೆ’ ಎಂದು ರಾಹುಲ ಗುಪ್ತಾ ತಿಳಿಸಿದರು.
‘ಸಿಸಿ ಟಿವಿ ಕ್ಯಾಮೆರಾದ ಕಣ್ಗಾವಲಿರಲಿಲ್ಲ. ನೆರಳಿನ ವ್ಯವಸ್ಥೆಯಿರಲಿಲ್ಲ. ವಾಹನಗಳಿಗೆ ಯಾವೊಂದು ಭದ್ರತೆಯೂ ಇರಲಿಲ್ಲ. ಇಲ್ಲಗಳ ನಡುವೆಯೇ ಶುಲ್ಕ ವಸೂಲಿ ಮಾಡುತ್ತಿದ್ದುದ್ದಕ್ಕೆ ತೀವ್ರ ವಿರೋಧವಿತ್ತು. ಇದೀಗ ತೆಗೆದುಕೊಂಡ ನಿರ್ಧಾರ ಸ್ವಾಗತಾರ್ಹ. ಅಪಾರ ಸಂಖ್ಯೆಯ ನಗರಿಗರು ಪಾಲಿಕೆಯ ಈ ನಿರ್ಧಾರಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ’ ಎಂದು ಮಹೇಶ ಚಟ್ಟೇರ ಪ್ರತಿಕ್ರಿಯಿಸಿದರು.
ಜನ ವಿರೋಧಿ ಟೆಂಡರ್ ರದ್ದು ಪಡಿಸುವಂತೆ ಸರ್ವಾನುಮತದ ನಿರ್ಣಯ ಅಂಗೀಕರಿಸಿದ್ದೇವೆ
ಪರಶುರಾಮ ರಜಪೂತ
ಪಾಲಿಕೆ ಸದಸ್ಯರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.