ಬಾಗಲಕೋಟೆ: ‘ಉತ್ತಮ ಆರೋಗ್ಯ ಹಾಗೂ ವ್ಯಕ್ತಿತ್ವ ರೂಪಿಸಿಕೊಳ್ಳಲು ಗ್ರಾಮೀಣ ಭಾಗದ ಯುವಜನತೆ ಕ್ರೀಡೆಗಳತ್ತ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಬೇಕು’ ಎಂದು ಮಾಜಿ ಶಾಸಕ ವೀರಣ್ಣ ಚರಂತಿಮಠ ಕಿವಿಮಾತು ಹೇಳಿದರು.
ಪಂಡಿತ್ ದೀನ ದಯಾಳ್ ಉಪಾಧ್ಯಾಯ ಅವರ ಜನ್ಮಶತಾಬ್ದಿ ನಿಮಿತ್ತ ಬಿಜೆಪಿ ಯುವ ಮೋರ್ಚಾ ವತಿಯಿಂದ ನಗರದ ಬಿ.ವಿ.ವಿ ಸಂಘದ ಬಸವೇಶ್ವರ ಕಾಲೇಜು ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ಗ್ರಾಮೀಣ ಕ್ರೀಡೆಗಳು ನಶಿಸುತ್ತಿವೆ. ಯುವಜನತೆ ದುಶ್ಚಟಗಳಿಗೆ ಬಲಿಯಾಗದೇ ಕ್ರೀಡೆಗಳತ್ತ ಆಸಕ್ತಿ ಬೆಳೆಸಿಕೊಂಡು ಗ್ರಾಮೀಣ ಕ್ರೀಡೆಗಳ ಪುನರುಜ್ಜೀವನಕ್ಕೆ ಶ್ರಮಿಸಬೇಕು. ಪ್ರತಿ ನಿತ್ಯ ವ್ಯಾಯಾಮ, ಯೋಗ, ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಸದೃಢ ದೇಹದಾರ್ಢ್ಯತೆ ಪಡೆಯಬೇಕು.
ದೇಶದ ಅಭಿವೃದ್ಧಿಯಲ್ಲಿ ಯುವಶಕ್ತಿ ಸಕ್ರಿಯವಾಗಿ ಪಾಲ್ಗೊಳ್ಳಬೇಕಿರುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದು ಬದುಕಿನ ಧ್ಯೇಯವಾಗಬೇಕು ಎಂದರು. ಯುವ ಸಮೂಹ ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಮುದಾಯದ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು. ತಮ್ಮ ಜವಾಬ್ದಾರಿ ಅರಿತು ಜನಮುಖಿ ಸೇವೆಯ ಮೂಲಕ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಚರಂತಿಮಠ ಸಲಹೆ ನೀಡಿದರು.
ಕಬಡ್ಡಿ ಪಂದ್ಯಾವಳಿಯಲ್ಲಿ ಬಾಗಲಕೋಟೆ ಮತಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮೀಣ ಭಾಗದ 20 ಹಾಗೂ ನಗರ ಪ್ರದೇಶದ 10 ತಂಡಗಳು ಪಾಲ್ಗೊಂಡಿದ್ದವು. ಬೆಳಿಗ್ಗೆಯಿಂದಲೇ ಪಂದ್ಯಾವಳಿ ಆರಂಭವಾಗಿದ್ದು ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಪ್ರೇಕ್ಷಕ ಸಮೂಹ ಆಟವನ್ನು ಆಸ್ವಾದಿಸಿತು.
ಉದ್ಘಾಟನೆ ಸಮಾರಂಭದಲ್ಲಿ ನಗರಸಭೆ ಅಧ್ಯಕ್ಷ ಶಂಕರಗೌಡ ಪಾಟೀಲ, ಬಿಜೆಪಿ ಯುವ ಮೋರ್ಚಾ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಬಸವರಾಜ ಯಂಕಂಚಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ರೇವಣಕರ, ನಗರ ಘಟಕದ ಅಧ್ಯಕ್ಷ ರಾಜು ನಾಯ್ಕರ, ಗ್ರಾಮೀಣ ಅಧ್ಯಕ್ಷ ರಾಜಶೇಖರ ಮುದೇನೂರ, ಮುಖಂಡರಾದ ಅಶೋಕ ಲಾಗಲೋಟಿ, ಬಸಲಿಂಗಪ್ಪ ನಾವಲಗಿ, ಈರಪ್ಪ ಐಕೂರ, ರಾಜು ಚಿಕ್ಕನಗೌಡರ, ಪಾಲಾಕ್ಷಿ ಕಟ್ಟಿಮಠ, ಗ್ರಾಮೀಣ ಅಧ್ಯಕ್ಷ ಚನ್ನಪ್ಪ ಮಾಚಕನೂರ, ಗುರು ಅನಗವಾಡಿ, ವೈಜಾಪೂರ, ಸಂಗಮೇಶ ಹಿತ್ತಲಮನಿ, ಶಂಕರ ಗಲಗ, ನರೇಂದ್ರ ಕುಪ್ಪಸ್ತ, ಬಸವರಾಜ ಅವರಾದಿ, ಬಸವರಾಜ ನಾಶಿ, ವೆಂಕಟೇಶ ಲೋಕಾಪೂರ, ಕಪ್ಪಯ್ಯ ಮುತ್ತಿನಮಠ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.