ಭದ್ರಾವತಿ: ದ್ವಿತೀಯ ಪಿಯು ಫಲಿತಾಂಶ ಭೀತಿಯಲ್ಲಿ ಮನೆ ತೊರೆದ ಬಾಲಕಿ ತೇರ್ಗಡೆಯಾಗಿರುವ ಸುದ್ದಿಯಾದರೂ ತಿಳಿದು ಮರಳಿ ಮನೆಗೆ ಬರಬಹುದೆಂಬ ನಿರೀಕ್ಷೆಯಲ್ಲಿ ತಾಯಿ ಇದ್ದಾರೆ.
ಕಾಗದನಗರ 6ನೇ ವಾರ್ಡ್ನಲ್ಲಿರುವ ತಾಯಿ ಅಸಿಯಾಬಾನು ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಮಗಳು ಅಂಜುಮ್ ಖಾನುಂ ನ್ಯೂಟೌನ್ ಬಾಲಕಿಯರ ಪದವಿಪೂರ್ವ ಕಾಲೇಜಿನ ಕಲಾ ವಿಭಾಗದ ದ್ವಿತೀಯ ಪರೀಕ್ಷೆ ಬರೆದು ತೇರ್ಗಡೆಯಾಗಿದ್ದಾರೆ.
ಆದರೆ, ಫಲಿತಾಂಶ ಪ್ರಕಟಣೆಯ ಹಿಂದಿನ ದಿನ ಮಧ್ಯಾಹ್ನ ಮನೆ ತೊರೆದ ಆಕೆಯನ್ನು ಹುಡುಕಿ, ಫಲಿತಾಂಶ ತಿಳಿಸಬೇಕು ಎಂದು ಸಂಬಂಧಿಕರು ಪ್ರಯತ್ನ ನಡೆಸಿದ್ದರು. ಅಂಜುಮ್ ಖಾನುಂ ಪತ್ತೆಗಾಗಿ ಇನ್ನಿಲ್ಲದಂತೆ ಪ್ರಯತ್ನ ನಡೆಸಿದ ಕುಟುಂಬ ದಿಕ್ಕುಗಾಣದೆ ಸೋಮವಾರ ಕಾಗದನಗರ ಠಾಣೆಗೆ ದೂರು ಸಲ್ಲಿಸಿದ್ದಾರೆ.
‘ಫಲಿತಾಂಶದ ಹಿಂದಿನ ದಿನ ಆಧಾರ್ ಕಾರ್ಡ್, ಅಂಕಪಟ್ಟಿ, ಕುಟುಂಬ ಭಾವಚಿ ತ್ರ ಸಮೇತ ಮನೆಯಿಂದ ಹೊರ ಹೋಗಿರುವ ನನ್ನ ತಂಗಿ ಪತ್ತೆಗಾಗಿ ಪ್ರಯತ್ನ ನಡೆಸಿದ್ದೇವೆ. ಆದರೂ ಮಾಹಿತಿ ಇಲ್ಲ’ ಎಂದು ಸಹೋದರ ಅಮಾನುಲ್ಲಾ ಖಾನ್ ಬೇಸರ ವ್ಯಕ್ತಪಡಿಸಿದರು.
‘ನಮಗೆ ತಂದೆ ಇಲ್ಲ. ನನ್ನ ಮದುವೆಯ ನಂತರ ತಾಯಿ ಹಾಗೂ ಅಣ್ಣ ನನ್ನ ತಂಗಿಯ ಓದಿಗೆ ಬಹಳಷ್ಟು ಕಷ್ಟಪಟ್ಟಿದ್ದರು. ಪ್ರಥಮ ಪಿಯುಸಿ ಪರೀಕ್ಷೆಯಲ್ಲಿ ಫೇಲಾದ ಸಮಯದಲ್ಲಿ ಸ್ವಲ್ಪ ಮಟ್ಟಿನ ತಿಳಿ ಹೇಳಿದ್ದರು. ನಂತರ ಆಕೆ ಪಾಸಾಗಿ ದ್ವಿತೀಯ ಪಿಯು ಪರೀಕ್ಷೆ ಬರೆದಿದ್ದಳು ಫಲಿತಾಂಶ ಹೆದರಿಕೆಯಲ್ಲಿ ಮನೆ ತೊರೆದಿದ್ದಾಳೆ.
ಪಾಸಾಗಿರುವ ವಿಷಯ ತಿಳಿದು ಬರಬಹುದು ಎಂಬ ಆಸೆ ಇದೆ’ ಎಂದು ಅಕ್ಕ ಷಾದಿಯಾ ಖಾನುಂ ವಿಶ್ವಾಸವ್ಯಕ್ತಪಡಿಸುತ್ತಾರೆ. ಅಂಜುಮ್ ಖಾನುಂ ಅವರ ಸುಳಿವು ಸಿಕ್ಕಲ್ಲಿ ಮೊಬೈಲ್ ಸಂಖ್ಯೆ 9972722428, 9972918602 ಸಂಪರ್ಕಿಸಬಹುದು.