ಲಕ್ಷ್ಮೇಶ್ವರ: ಗಿಡ ಮರಗಳ ನಾಶದಿಂದಾಗಿ ಪರಿಸರದ ಮೇಲೆ ಆಗುತ್ತಿರುವ ಪರಿಣಾಮಗಳ ಬಗ್ಗೆ ಶಾಲಾ ಕಾಲೇಜುಗಳ ಮಕ್ಕಳಲ್ಲಿ ಅರಿವು ಮೂಡಿಸಿ ಪರಿಸರ ರಕ್ಷಣೆಯಲ್ಲಿ ಅವರು ಸಕ್ರೀಯವಾಗಿ ಪಾಲ್ಗೊಳ್ಳಲು ನೆರವಾಗಬೇಕು ಎನ್ನುವ ಉದ್ಧೇಶದಿಂದ ಉತ್ಥಿಷ್ಠ ಭಾರತ ಸಂಸ್ಥೆ ರಾಜ್ಯದಲ್ಲೆಡೆ ಸೀಡ್ ಬಾಲ್ ಅಭಿಯಾನ ಹಮ್ಮಿ ಕೊಂಡಿದೆ. ಇದಕ್ಕೆ ಈಚೆಗೆ ಪಟ್ಟಣದ ಅಗಡಿ ಎಂಜನಿಯರಿಂಗ್ ಕಾಲೇಜಿನಲ್ಲಿ ಸಂಸ್ಥೆಯ ಪದಾಧಿಕಾರಿಗಳು ಅಭಿಯಾನಕ್ಕೆ ಚಾಲನೆ ನೀಡಿದರು.
ಕಾಲೇಜಿನ ನೂರಾರು ಮಕ್ಕಳು ಸೀಡ್ ಬಾಲ್ ಅಭಿಯಾನದಲ್ಲಿ ಭಾಗವಹಿಸಿದ್ದರು. ಸಣ್ಣ ಸಣ್ಣ ಮಣ್ಣಿನ ಉಂಡೆಗಳನ್ನು ಮಾಡಿ ಅದರಲ್ಲಿ ಸುಬಾಬುಲ್, ಹೊಂಗೆ, ಹುಣಸೆ, ಬೇವು, ಮಾವು ಸೇರಿದಂತೆ ಮತ್ತಿತರ ಬೀಜಗಳನ್ನು ತುಂಬಿ ಅವು ಒಣಗಿದ ನಂತರ ಕಾಡಿನಲ್ಲಿ ಬೀಜದುಂಡೆಗಳನ್ನು ಬಿತ್ತನೆ ಮಾಡುವುದು ಅಭಿಯಾನದ ಉದ್ಧೇಶ.
‘ಒಂದು ಲಕ್ಷ ಸೀಡ್ಬಾಲ್ ಬಿತ್ತನೆ ಮಾಡುವ ಗುರಿಯೊಂದಿಗೆ 2014ರಲ್ಲಿ ಅಭಿಯಾನ ಆರಂಭವಾಯಿತು. ಈವರೆಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ 40 ಲಕ್ಷ ಸೀಡ್ಬಾಲ್ಗಳ ಬಿತ್ತನೆ ಮಾಡಲಾಗಿದೆ. ಒಟ್ಟು ಮೂರು ಕೋಟಿ ಸೀಡ್ಬಾಲ್ ಗಳನ್ನು ಕಾಡಿನ ಪ್ರದೇಶಗಳಲ್ಲಿ ಬಿತ್ತನೆ ಮಾಡುವ ಉದ್ಧೇಶ ಇದೆ’ ಎಂದು ಸಂಸ್ಥೆಯ ನರೇಂದ್ರ, ಶ್ರೀವತ್ಸ ಮತ್ತು ಜಗದೀಶಗೌಡ ಹೇಳಿದರು.
‘ಅಗಡಿ ಕಾಲೇಜಿನಲ್ಲಿ ಸಿದ್ಧಗೊಂಡಿ ರುವ ಸೀಡ್ಬಾಲ್ಗಳನ್ನು ಕಪ್ಪತ್ತಗುಡ್ಡದ ತಪ್ಪಲು ಪ್ರದೇಶದಲ್ಲಿ ಬಿತ್ತನೆ ಮಾಡ ಲಾಗುವುದು’ ಎಂದು ಕಾಲೇಜಿನ ಎನ್ ಎಸ್ಎಸ್ ಘಟಕದ ಅಧಿಕಾರಿ ಪ್ರೊ. ಸೋಮಶೇಖರ ಕೆರಿಮನಿ ತಿಳಿಸಿದರು.