ಬಾಗಲಕೋಟೆ: ತೀವ್ರ ಬರದ ಸಮಸ್ಯೆಯಿಂದಾಗಿ ಕೃಷ್ಣಾ ನದಿಯಲ್ಲಿ ನೀರು ಖಾಲಿಯಾದ ಕಾರಣ ಹತ್ತಿರದ ಹಳ್ಳಿಯ ದೇವಾಲಯವೊಂದರಲ್ಲಿ ಆಶ್ರಯ ಪಡೆದಿದ್ದ ಮೊಸಳೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಬುಧವಾರ ರಕ್ಷಿಸಿದ್ದಾರೆ.
ಜಿಲ್ಲೆಯ ಬೀಳಗಿ ತಾಲ್ಲೂಕಿನ ಸೊನ್ನ ಗ್ರಾಮದ ಹನುಮಂತ ದೇವರ ಗುಡಿಯಲ್ಲಿ ಮೊಸಳೆ ಆಶ್ರಯ ಪಡೆದಿತ್ತು. ಇದನ್ನು ಗಮನಿಸಿದ ಗ್ರಾಮಸ್ಥರು ಆತಂಕ ಗೊಂಡಿದ್ದರು. ನಂತರ ಅರಣ್ಯ ಇಲಾಖೆಗೆ ವಿಷಯ ತಿಳಿಸಿದ್ದಾರೆ.
ತಕ್ಷಣ ಸ್ಥಳಕ್ಕಾಗಮಿಸಿದ ಸಿಬ್ಬಂದಿ ಗ್ರಾಮಸ್ಥರ ನೆರವಿನಿಂದ ಮೊಸಳೆಯನ್ನು ರಕ್ಷಿಸಿದ್ದಾರೆ. ಇದೇ ವೇಳೆ ಸಮೀಪದ ಕೊರ್ತಿ ಗ್ರಾಮದಲ್ಲಿಯೂ ಮತ್ತೊಂದು ಮೊಸಳೆ ಕಾಣಿಸಿಕೊಂಡಿದ್ದು, ಅದನ್ನು ಸಹ ರಕ್ಷಿಸಲಾಗಿದೆ.