ಬೆಂಗಳೂರು: ಬೊಮ್ಮನಹಳ್ಳಿ ವಲಯವು ಬಿಬಿಎಂಪಿಗೆ ಸೇರ್ಪಡೆಗೊಂಡು ವರ್ಷಗಳೇ ಕಳೆದಿದ್ದರೂ ಇಲ್ಲಿನ ರಸ್ತೆಗಳನ್ನು ಅಭಿವೃದ್ಧಿ ಪಡಿಸುವ ಕೆಲಸ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇಲ್ಲಿನ ಬಹುತೇಕ ರಸ್ತೆಗಳು ಜನರ ಉಪಯೋಗಕ್ಕೆ ಯೋಗ್ಯವಾಗಿಲ್ಲ. ಸಾಧಾರಣ ಮಳೆ ಬಂದರೂ ರಸ್ತೆಗಳಲ್ಲಿ ಓಡಾಡಲು ಸಾಧ್ಯವಾಗುವುದಿಲ್ಲ.
‘ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ಡಾಂಬರು ಹಾಕದ ರಸ್ತೆಗಳು ಕೆಸರು ಗದ್ದೆಯಂತಾಗಿವೆ. ಇದರಿಂದ ದ್ವಿಚಕ್ರ ವಾಹನ ಸವಾರರು ಜೀವಭಯದಲ್ಲಿ ವಾಹನ ಓಡಿಸುವಂತಾಗಿದೆ’ ಎಂದು ವಾಜಪೇಯಿ ಬಡಾವಣೆಯ ಗ್ಲಾಡಿಸ್ ಪರೇರಾ ಅಳಲು ತೋಡಿಕೊಂಡರು.
‘ರಾಜ್ಯ ಸರ್ಕಾರವು ರಸ್ತೆಗಳ ಅಭಿವೃದ್ಧಿಗೆ ನಗರೋತ್ಥಾನ ಯೋಜನೆಯಡಿ ನೂರಾರು ಕೋಟಿ ಖರ್ಚು ಮಾಡುತ್ತಿದೆ. ಆದರೆ, ಆ ಹಣ
ಸಮರ್ಪಕವಾಗಿ ಬಳಕೆ ಆಗುತ್ತಿಲ್ಲ’ ಎಂದು ಗಾರ್ವೆಬಾವಿಪಾಳ್ಯದ ದಯಾನಂದ್ ದೂರಿದರು.
‘ಪ್ರಭಾವಿಗಳು ವಾಸಿಸುವ ಬಡಾವಣೆಗಳಲ್ಲಿ ಮಾತ್ರ ಉತ್ತಮ ರಸ್ತೆಗಳನ್ನು ನಿರ್ಮಿಸಲಾಗಿದೆ. ಜನಸಾಮಾನ್ಯರು ವಾಸಿಸುವ ಪ್ರದೇಶಗಳ ರಸ್ತೆಗಳನ್ನು ಕಡೆಗಣಿಸಲಾಗಿದೆ’ ಎಂದು ಆರೋಪಿಸಿದರು.