ಚಿಕ್ಕಬಳ್ಳಾಪುರ: ನಗರದಲ್ಲಿ ಗುರುವಾರ ಸಂಜೆಯಿಂದ ಕಾಣಿಸಿಕೊಂಡ ಮಳೆಯು ತಡರಾತ್ರಿ ವರೆಗೂ ಮುಂದುವರಿದಿತ್ತು. ಸಿಡಿಲು, ಗಾಳಿ ಅಬ್ಬರ ಕೂಡ ಜೋರಾಗಿತ್ತು. ನಿರಂತರವಾಗಿ ಸೋನೆ ಮಳೆಯು ಆಗಾಗ ಬಿರುಸಿನಿಂದ ಆರ್ಭಟಿಸುತ್ತಿತ್ತು. ಮಳೆಗಾಳಿಯ ಪರಿಣಾಮ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಿತ್ತು.
ನಗರದ ಚರಂಡಿ, ಕಾಲುವೆಗಳು ತುಂಬಿ ಹರಿದವು. ತಗ್ಗು ಪ್ರದೇಶಗಳಲ್ಲಿ ಮಳೆ ನೀರಿನ ಪ್ರವಾಹ ಸೃಷ್ಟಿಯಾಗಿತ್ತು. ರೇಷ್ಮೆಗೂಡು ಮಾರುಕಟ್ಟೆ ಹಿಂಭಾಗದ ಪ್ರದೇಶ, ಸಾಧುಮಠದ ರಸ್ತೆ, ನೂತನ ಜಿಲ್ಲಾಸ್ಪತ್ರೆ ಮುಂಭಾಗ ಪ್ರದೇಶದಲ್ಲಿ ಕೆಲ ಮನೆಗಳಿಗೆ ನೀರು ನುಗ್ಗಿತ್ತು.
ಕೆಳಗಿನ ತೋಟದ , ಮಂಚನ ಬಲೆ ರಸ್ತೆ, ನೂತನ ಜಿಲ್ಲಾಸ್ಪತ್ರೆ ಮುಂಭಾಗದ ರಸ್ತೆ, ವೇಣುಗೋಪಾಲ ಸ್ವಾಮಿ ದೇವಸ್ಥಾನ ಮುಂಭಾಗದ ರಸ್ತೆ, ಜಿಲ್ಲಾ ಕ್ರೀಡಾಂಗಣ ಹಿಂಭಾಗದ ರಸ್ತೆ, ಅಂಬೇಡ್ಕರ್ ನಗರ ಮೇಲ್ಸೇತ್ಸುವೆ ಬಳಿ ಪಾದಚಾರಿಗಳು, ವಾಹನ ಸವಾರರು ತೊಂದರೆ ಅನುಭವಿಸಿದರು.