ಆನೇಕಲ್ : ‘ಧಾರ್ಮಿಕ ಕಾರ್ಯಗಳು ಗ್ರಾಮದ ಶಾಂತಿ, ನೆಮ್ಮದಿಗೆ ಪೂರಕ ಹಾಗಾಗಿ ಪ್ರತಿ ಗ್ರಾಮದಲ್ಲೂ ದೇವಾಲಯಗಳನ್ನು ನಿರ್ಮಿಸಿ ಧಾರ್ಮಿಕ ಕಾರ್ಯಗಳನ್ನು ನಡೆಸುವ ಉನ್ನತ ಪರಂಪರೆ ನಮ್ಮದಾಗಿದೆ’ ಎಂದು ರಾಜಾಪುರ ಸಂಸ್ಥಾನ ಮಠದ ಡಾ.ರಾಜೇಶ್ವರ ಶಿವಾಚಾರ್ಯ ಸ್ವಾಮಿಜಿ ಹೇಳಿದರು.
ಅವರು ತಾಲ್ಲೂಕಿನ ಕೂನಮಡಿವಾಳ ಗ್ರಾಮದಲ್ಲಿ ಜೀರ್ಣೊದ್ಧಾರಗೊಂಡ ಪ್ರಸನ್ನ ಸೋಮೇಶ್ವರ ಸ್ವಾಮಿ ದೇವಾಲಯದಲ್ಲಿ ಕುಂಭಾಭಿಷೇಕ ಹಾಗೂ ಪ್ರತಿಷ್ಠಾಪನ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ದೇವಾಲಯ ಜೀರ್ಣೋದ್ಧಾರದ ಅಂಗವಾಗಿ ಮೂರು ದಿನಗಳಿಂದ ಪೂಜಾಕಾರ್ಯ ನಡೆಯುತ್ತಿದ್ದು, ಜನರು ಸಂತಸ ದಿಂದಿದ್ದಾರೆ. ಇದರ ಜತೆ ವರುಣನ ಕೃಪೆಯೂ ಅಗಿದ್ದು ಅವರಲ್ಲಿ ನೆಮ್ಮದಿ ತಂದಿದೆ. ಧಾರ್ಮಿಕ ಕಾರ್ಯಗಳು ಮನಸ್ಸಿಗೆ ಶಾಂತಿ ನೀಡುವುದರಿಂದ ಇವುಗಳ ಆಚರಣೆ ಹೆಚ್ಚಬೇಕು ಎಂದರು.
ನಾಗಲಾಪುರ ಸಂಸ್ಥಾನ ಮಠದ ತೇಜೇಶಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಭೂಮಿ ಮೇಲಿನ ಲಕ್ಷಾಂತರ ಜೀವರಾಶಿಗಳನ್ನು ಭಗವಂತ ಸೃಷ್ಠಿ ಮಾಡಿದ. ಆದರೆ ಇವುಗಳಲ್ಲಿ ಯಾವ ಜೀವವೂ ಧರ್ಮ ಕಾರ್ಯ ಮಾಡದ ಕಾರಣ ದೇವರು ಶಾಂತಿ, ಧರ್ಮಸ್ಥಾಪನೆಗಾಗಿ ಮನುಷ್ಯನನ್ನು ಸೃಷ್ಠಿಸಿದ ಎಂದರು.
ಮಾಜಿ ಸಚಿವ ಎ.ನಾರಾಯಣಸ್ವಾಮಿ ಮಾತನಾಡಿ ಧಾರ್ಮಿಕ ಚಿಂತನೆಗಳು ಪ್ರತಿಯೊಬ್ಬರಲ್ಲೂ ಮೂಡಬೇಕು. ಗ್ರಾಮಕ್ಕೊಂದು ಶಾಲೆ ಹಾಗು ಒಂದು ದೇವಾಲಯವಿದ್ದರೆ ಊರಿಗೆ ಭೂಷಣ. ಶಿಕ್ಷಣ ಒಂದು ಕಡೆಯಾದರೆ ಮತ್ತೊಂದೆಡೆ ಧರ್ಮಾಚರಣೆ ನಡೆಯುತ್ತದೆ ಎಂದರು. ಮಲೆ ಮಹಾದೇಶ್ವರ ಬೆಟ್ಟದ ಸಾಲೂರು ಮಠದ ಗುರುಸ್ವಾಮಿ ಶಿವಾಚಾರ್ಯ ಸ್ವಾಮೀಜಿ, ಗುಮ್ಮಳಾಪುರ ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಗೊಟ್ಟಿಗೆರೆ ಮಂಜಣ್ಣ, ಹಾಪ್ಕಾಮ್ಸ್ ಮಾಜಿ ನಿರ್ದೇಶಕ ಹಾಗೂ ದೇವಾಲಯ ಸಮಿತಿಯ ಮುಖ್ಯಸ್ಥ ಸೋಮಣ್ಣ, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೊಡ್ಡಹಾಗಡೆ ಹರೀಶ್ಗೌಡ, ತಾಲ್ಲೂಕು ಪಂಚಾಯಿತಿ ಸದಸ್ಯ ಆನಂದ್ಕುಮಾರ್, ನಗರಸಭೆ ಸದಸ್ಯ ಕೆ.ಪಿ.ರಾಜು, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ದೇವೇಗೌಡ, ಬ್ಯಾಗಡದೇನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶಂಕರ್, ಕೂನಮಡಿವಾಳ ಗ್ರಾಮದ ಮುಖಂಡರಾದ ಕೆಂಪಣ್ಣ, ಮುನಿರಾಜು, ಅಣ್ಣಯ್ಯಪ್ಪ, ರಮೇಶ್, ಚಿಕ್ಕಣ್ಣಯ್ಯ, ಶಾಮಣ್ಣ, ಸುರೇಶ್, ಉಮೇಶ್, ನಾಗರಾಜ್, ಆನಂದ್, ಜುಂಜಪ್ಪ ವೆಂಕಟೇಶ್, ಚಂದ್ರಪ್ಪ, ಗ್ರಾಮ ಲೆಕ್ಕಾಕಾರಿ ಸಂಗಮೇಶ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.