ಕಾನ್, ಬರ್ಲಿನ್, ವೆನಿಸ್ ಈ ಮೂರೂ ಚಿತ್ರೋತ್ಸವಗಳು ವಿಶ್ವಸಿನಿಮಾ ನಕ್ಷೆಯಲ್ಲಿ ಪ್ರಮುಖವಾದವು. ಸಮಕಾಲೀನ ಜಗತ್ತಿನ ಕುರಿತ ಸಂವಾದಕ್ಕೆ ಇವು ವೇದಿಕೆ ಎನ್ನಿಸಿಕೊಂಡಿವೆ. ಜನಪ್ರಿಯ ಚಿತ್ರಗಳಿಗೆ ಆಸ್ಕರ್ ಹೇಗೋ, ಪರ್ಯಾಯ ಹಾಗೂ ಕಲಾತ್ಮಕ ಚಿತ್ರಗಳಿಗೆ ಕಾನ್ ಹಾಗೆ. ‘ಗಾಂಧಿ’ ಚಿತ್ರಕ್ಕೆ ಆಸ್ಕರ್ ಗೌರವ ಸಂದಿತು. ಆದರೆ, ಕಾನ್ನಲ್ಲಿ ಅದಕ್ಕೆ ಒಂದೂ ಪ್ರಶಸ್ತಿ ಸಿಗಲಿಲ್ಲ. ಸಮಕಾಲೀನ ಸಮಸ್ಯೆಗಳಿಗೆ ಚಿತ್ರೋತ್ಸವ ನಿರಂತರವಾಗಿ ಕನ್ನಡಿ ಹಿಡಿಯುತ್ತಾ ಬಂದಿದೆ. ಈಗ ಲಿಂಗ ಸಮಾನತೆ, ಮೂಲ ನಿವಾಸ ತೊರೆಯಬೇಕಾದವರ ತಾಕಲಾಟಗಳು, ವರ್ಣಭೇದದ ಬದಲಾದ ಸಮಸ್ಯೆಗಳು ಎಷ್ಟೋ ಸಿನಿಮಾಗಳ ವಸ್ತುವಾಗುತ್ತಿವೆ.
‘ಕಾನ್ ಚಿತ್ರೋತ್ಸವ’ದಲ್ಲಿ ಸ್ಪರ್ಧೆಗೆ ಬರುವ ಚಿತ್ರಗಳನ್ನು ನಿರೂಪಣೆಯ ದೃಷ್ಟಿಯಲ್ಲಿ ನೋಡಬೇಕು. ಸಿನಿಮಾ ಕಟ್ಟುವಿಕೆಯಲ್ಲಿ ಮಾಡುವ ಪ್ರಯೋಗಗಳು ಆಗ ಸ್ಪಷ್ಟವಾಗಿ ತಿಳಿಯುತ್ತದೆ. ಒಂದು ರೀತಿಯಲ್ಲಿ ಅದು ‘ಆರ್ಟ್ ಆಫ್ ಮೇಕಿಂಗ್’ನ ಪ್ರಾತ್ಯಕ್ಷಿಕೆ. ದೃಶ್ಯಭಾಷೆ ಅರಿಯುವ ಹಸಿವಿರುವವರಿಗೆ ಇದು ಸದವಕಾಶ. ಭಾರತದವರಿಗೂ ಇಂಥ ಚಿತ್ರೋತ್ಸವ ನೋಡುವ ಹಂಬಲವಿರುತ್ತದೆ.
‘ಕರ್ನಾಟಕ ಚಲನಚಿತ್ರ ಅಕಾಡೆಮಿ’ ಪ್ರತಿನಿಧಿಗಳು ಉತ್ಸವಕ್ಕೆ ಹೋಗುತ್ತಾರೆ. ಅಲ್ಲಿಗೆ ಹೋಗಿ ಬಂದವರು ಇಲ್ಲಿನ ನಮ್ಮ ಚಿತ್ರೋತ್ಸವಗಳನ್ನು ಇನ್ನೂ ಉತ್ತಮಪಡಿಸುವ ಮಾದರಿ ಕ್ರಮಗಳನ್ನು ಅನುಸರಿಸಬೇಕು.
ಸೆಲೆಬ್ರಿಟಿಗಳು, ಪಾರ್ಟಿಗಳು, ಕಡಲತಟದ ವೈಭವೋಪೇತ ಕ್ಷಣಗಳನ್ನೇ ಅದ್ದೂರಿತನದ ಮಾದರಿ ಎಂದಷ್ಟೇ ಭಾವಿಸುವುದು ತರವಲ್ಲ. ಕಾನ್ ಚಿತ್ರೋತ್ಸವದ ಸಮಗ್ರ ತತ್ತ್ವವನ್ನು ಅರ್ಥಮಾಡಿಕೊಂಡಾಗಷ್ಟೇ ಅದನ್ನು ನೋಡಿಬರುವ ಭಾರತೀಯರು ಬದಲಾವಣೆ ಮಾಡಿಕೊಳ್ಳಬಹುದು. ಈಗಲೂ ನಾವು, ಸಿನಿಮಾ ಅಂದರೆ ಕಥೆ ಹೇಳಿಬಿಡಬೇಕು ಎಂಬ ಧೋರಣೆಯಲ್ಲೇ ಉಳಿದುಬಿಟ್ಟಿದ್ದೇವೆ.
ಗಿರೀಶ ಕಾಸರವಳ್ಳಿ, ಖ್ಯಾತ ಚಲನಚಿತ್ರ ನಿರ್ದೇಶಕ
****
ಬೆಳೆದ ಮಾರುಕಟ್ಟೆ
1972ರಲ್ಲಿ ಚಿತ್ರೋತ್ಸವದಲ್ಲಿ ಗಮನಾರ್ಹ ಬದಲಾವಣೆಯಾಯಿತು. ಅದರ ಸಂಕೇತವಾಗಿ ಆಲ್್ಫ್ರೆಡ್ ಹಿಚ್ಕಾಕ್ ಬೈಕ್ ಸವಾರಿ ಮಾಡಿದರು. ಕಾನ್ ಚಿತ್ರೋತ್ಸವದಲ್ಲಿ ಸಿನಿಮಾ ಗಮನ ಸೆಳೆಯದೇ ಹೋದರೆ ಅದು ಸೋತಂತೆಯೇ ಎಂಬ ಅಭಿಪ್ರಾಯ ಆ ಕಾಲಘಟ್ಟದಲ್ಲಿ ಇತ್ತು. ‘ದಿ ಐಸ್ ಸ್ಟಾರ್ಮ್’ ಹಾಗೂ ‘ನರ್ಸ್ ಬೆಟ್ಟಿ’ ಚಿತ್ರಗಳನ್ನು ಅಮೆರಿಕ ಚಿತ್ರೋತ್ಸವಕ್ಕೆ ಕಳುಹಿಸಿಕೊಡಲೂ ಅದೇ ಕಾರಣ. ಆ ಚಿತ್ರಗಳು ನಿರೀಕ್ಷಿತ ಮಟ್ಟದಲ್ಲಿ ಗಮನ ಸೆಳೆಯಲಿಲ್ಲ. ಹಾಗಾಗಿ ಹಾಲಿವುಡ್ ಸ್ಟುಡಿಯೋಸ್ಗೆ ಈ ಚಿತ್ರೋತ್ಸವ ಪ್ರತಿಷ್ಠೆಯ ಪ್ರಶ್ನೆಯಾಯಿತು. ‘ಸನ್್ಚೇಸರ್’, ‘ಮಿಷನ್ ಟು ಮಾರ್ಸ್’ ದೊಡ್ಡ ಬಜೆಟ್ನ ಚಿತ್ರಗಳನ್ನು ಕಳುಹಿಸಲಾರಂಭಿಸಿತು.
2001ರಲ್ಲಿ ಫಾಕ್ಸ್ ಸ್ಟುಡಿಯೋಸ್ ‘ಮೌಲಿನ್ ರೋಗ್’ ಚಿತ್ರವನ್ನು ಉದ್ಘಾಟನಾ ಸಿನಿಮಾ ಆಗಿ ಪ್ರದರ್ಶನಗೊಳ್ಳಲೆಂದು ಕಳುಹಿಸಿಕೊಟ್ಟಿತು. ಚಿತ್ರದ ಪಾರ್ಟಿಯ, ನೃತ್ಯಗಾರರ ದೃಶ್ಯಗಳನ್ನು ಉತ್ಸವದ ತಾಣದ ಕೆಂಪುಹಾಸಿನ ಮೇಲೆ ಮರುಸೃಷ್ಟಿಸಿದ್ದರು. ಆ ಚಿತ್ರ ದೊಡ್ಡ ಮಟ್ಟದಲ್ಲಿ ಯಶಸ್ವಿಯಾದ ಮೇಲೆ ಕಾನ್ ಚಿತ್ರೋತ್ಸವವನ್ನು ಅವಕಾಶದ ಕೊಂಡಿ ಎಂದು ಹಾಲಿವುಡ್ ಪರಿಗಣಿಸಿತು.
‘ದಿ ಲಾರ್ಡ್ ಆಫ್ ದಿ ರಿಂಗ್ಸ್: ದಿ ಫೆಲೋಷಿಪ್ ಆಫ್ ದಿ ರಿಂಗ್’ ಚಿತ್ರದ ತುಣುಕೊಂದನ್ನು ಪ್ರದರ್ಶಿಸಿದ ನಂತರ ಜಾಗತಿಕ ಮಟ್ಟದಲ್ಲಿ ವಿತರಕರು ಆ ಚಿತ್ರಕ್ಕೆ ಮಾರುಕಟ್ಟೆ ಕಲ್ಪಿಸಲು ಮುಂದಾದರು. ಜೆ.ಜೆ.ಆರ್. ಟೊಕೀನ್ ಬರೆದ ಶ್ರೇಷ್ಠ ಕೃತಿಗಳನ್ನು ಆಧರಿಸಿದ ಮೂರು ಸಿನಿಮಾಗಳಿಗೆ 20 ಕೋಟಿ ಡಾಲರ್ ಬಂಡವಾಳ ಹೂಡಲು ಆಸಕ್ತರು ಮುಂದೆ ಬರಲು ಆ ತುಣುಕಿನ ಪ್ರದರ್ಶನ ಕಾರಣವಾಯಿತೆನ್ನುವುದು ವಿಶೇಷ.
****
ನಾನು ಅದೃಷ್ಟವಂತ
ನನ್ನ ನಿರ್ದೇಶನದ ‘ಪಿರವಿ’ ಮಲಯಾಳಂ ಚಿತ್ರಕ್ಕೆ ಕಾನ್ ಚಿತ್ರೋತ್ಸವದಲ್ಲಿ ‘ಗೋಲ್ಡನ್ ಕ್ಯಾಮೆರಾ’ ಗೌರವ ಸಿಕ್ಕಿತಲ್ಲ, ಆಗ ಯುರೋಪ್ನ ಹಲವು ಕೇಂದ್ರಗಳಲ್ಲಿ ಸಿನಿಮಾ ಬಿಡುಗಡೆಯಾಯಿತು. ಅಲ್ಲಿ ನನ್ನ ಚಿತ್ರವನ್ನು ಮಾರ್ಕೆಟ್ ಮಾಡಿದವರಿಗೆ ಉತ್ತಮ ಹಣವೂ ಬಂದಿತು.
ಜಾಗತಿಕ ಮಟ್ಟದಲ್ಲಿ ಪ್ರಯೋಗಾತ್ಮಕ ಸಿನಿಮಾಗಳಿಗೆ ‘ಆಸ್ಕರ್’ಗಿಂತ ದೊಡ್ಡ ವೇದಿಕೆ ಕಾನ್ ಎಂದು ನನಗೆ ಅರಿವಾದದ್ದೇ ಆಗ. ನನ್ನ ಎರಡನೇ ಚಿತ್ರ ‘ಸ್ವಾಹಂ’ ಕೂಡ ಕಾನ್ ಚಿತ್ರೋತ್ಸವದ ಸ್ಪರ್ಧೆಯಲ್ಲಿತ್ತು. ‘ವಾನಪ್ರಸ್ಥಂ’ ಚಿತ್ರವನ್ನೂ ಅಲ್ಲಿಗೆ ತೆಗೆದುಕೊಂಡು ಹೋಗಿದ್ದೆ. ಈ ವಿಷಯದಲ್ಲಿ ನಾನು ಅದೃಷ್ಟವಂತ.
–ಶಾಜಿ ಎನ್. ಕರುಣ್
****
ಕಾನ್ನಲ್ಲಿ ಭಾರತದ ಸಾಧನೆ
ಚೇತನ್ ಆನಂದ್ ನಿರ್ದೇಶನದ ‘ನೀಚಾ ನಗರ್’ ಹಿಂದಿ ಚಿತ್ರವು ಕಾನ್ ಚೊಚ್ಚಲ ಚಿತ್ರೋತ್ಸವದಲ್ಲಿ ‘ಗ್ರ್ಯಾಂಡ್ ಪ್ರಿ ಡ್ಯು ಫೆಸ್ಟಿವಲ್ ಇಂಟರ್ನ್ಯಾಷನಲ್ ಡ್ಯು ಫಿಲ್ಮ್’ ಪ್ರಶಸ್ತಿ ಗೆದ್ದುಕೊಂಡಿತು. 1955ರಲ್ಲಿ ಪ್ರಕಾಶ್ ಅರೊರಾ ನಿರ್ದೇಶನದ ‘ಬೂಟ್ ಪಾಲಿಷ್’ ಹಿಂದಿ ಚಿತ್ರದ ಅಭಿನಯಕ್ಕೆ ನಟಿ ನಾಜ್ ಅವರಿಗೆ ವಿಶೇಷ ಉಲ್ಲೇಖದ ಗೌರವ ಸಂದಿತು.
ಸತ್ಯಜಿತ್ ರೇ ನಿರ್ದೇಶನದ ಬಂಗಾಳಿ ಚಿತ್ರ ‘ಪಥೇರ್ ಪಾಂಚಾಲಿ’ 1956ರಲ್ಲಿ ‘ಶ್ರೇಷ್ಠ ಮಾನವೀಯ ಅಂಶಗಳ ದಾಖಲೆಗಳು ಇರುವ ಚಿತ್ರ’ ಎಂದು ಕಾನ್ ಚಿತ್ರೋತ್ಸವದ ಮನ್ನಣೆ ಪಡೆಯಿತು. ಅದೇ ವರ್ಷ ರಾಜ್ಬನ್ಸ್ ಖನ್ನಾ ನಿರ್ದೇಶನದ ‘ಗೊತೊಮ ದಿ ಬುದ್ಧ’ ಚಿತ್ರಕ್ಕೆ ವಿಶೇಷ ಉಲ್ಲೇಖದ ಮನ್ನಣೆ.
ಹೊಸ ಸಂವೇದನೆಯ ಚಿತ್ರಗಳಿಗೆ ಹೆಸರಾದವರು ಮೃಣಾಲ್ ಸೆನ್. ಅವರ ನಿರ್ದೇಶನದ ‘ಖಾರಿಜ್’ ಹಿಂದಿ ಚಿತ್ರಕ್ಕೆ 1983ರಲ್ಲಿ ತೀರ್ಪುಗಾರರ ಪ್ರಶಸ್ತಿ ಒಲಿದುಬಂತು. ಮೀರಾ ನಾಯರ್ ನಿರ್ದೇಶನದ ‘ಸಲಾಂ ಬಾಂಬೆ’ (ಹಿಂದಿ ಚಿತ್ರ, 1988) ಹಾಗೂ ಶಾಜಿ ಕರಣ್ ನಿರ್ದೇಶನದ ‘ಪಿರವಿ’ (ಮಲಯಾಳಂ, 1989) ‘ಗೋಲ್ಡನ್ ಕ್ಯಾಮೆರಾ’ ಪ್ರಶಸ್ತಿಗಳಿಗೆ ಪಕ್ಕಾದವು.
1999ರಲ್ಲಿ ಮುರಳಿ ನಾಯರ್ ನಿರ್ದೇಶನದ ‘ಮರಣ ಸಿಂಹಾಸನಂ’ ಮಲಯಾಳಂ ಸಿನಿಮಾಗೂ ಇದೇ ಪ್ರಶಸ್ತಿ ಸಂದಿತು. 2013ರಲ್ಲಿ ಭಾರತ ಚಲನಚಿತ್ರೋದ್ಯಮಕ್ಕೆ ನೂರು ವರ್ಷ ತುಂಬಿದ ಸಂದರ್ಭದಲ್ಲಿ ಕಾನ್ ಚಿತ್ರೋತ್ಸವಕ್ಕೆ ಅಧಿಕೃತ ಅತಿಥಿಯಾಗುವ ಗೌರವ ದೇಶಕ್ಕೆ ಸಿಕ್ಕಿದ್ದು ಇನ್ನೊಂದು ವಿಶೇಷ. ಆ ವರ್ಷ ನಟಿ ವಿದ್ಯಾ ಬಾಲನ್ ತೀರ್ಪುಗಾರರಲ್ಲಿ ಒಬ್ಬರಾಗಿದ್ದರು.
ಸ್ಪರ್ಧೆಗೆ ದೇಶದ ಕೆಲವು ಚಿತ್ರಗಳು ಹೋಗಿದ್ದವರಾದರೂ ನೆನಪಿನಲ್ಲಿ ಉಳಿಯುವಂಥವು ಮೇಲೆ ಉಲ್ಲೇಖಿಸಿದ ಚಿತ್ರಗಳಷ್ಟೆ. ಮಾರ್ಕೆಟಿಂಗ್ ದೃಷ್ಟಿಯಿಂದ ಭಾರತೀಯ ಚಿತ್ರಗಳನ್ನು ಅಲ್ಲಿ ವಿವಿಧ ವಿಭಾಗಗಳಲ್ಲಿ ಪ್ರದರ್ಶಿಸುವುದೂ ಉಂಟು.
****
ಈ ಸಲದ ಸ್ಪರ್ಧೆಯಲ್ಲಿ…
ನಿಕೋಲ್ ಕಿಡ್ಮನ್ ಈ ಬಾರಿ ಸುದ್ದಿಯಲ್ಲಿದ್ದಾರೆ. ಅವರ ನಾಲ್ಕು ಪ್ರಾಜೆಕ್ಟ್ಗಳು ಚಿತ್ರೋತ್ಸವದಲ್ಲಿವೆ. ಅವರ ‘ದಿ ಬೆಗ್ಯೂಲ್ಡ್’ ಚಿತ್ರದ ಬಗೆಗೆ ನಿರೀಕ್ಷೆಗಳಿವೆ. ಸೋಫಿಯಾ ಕೊಪೊಲಾ ನಿರ್ದೇಶನದ ಈ ಸಿನಿಮಾ ಪಾಮ್ ಡಿ’ಓರ್ ಪ್ರಶಸ್ತಿಯ ಸ್ಪರ್ಧೆಯಲ್ಲಿದೆ. ನಾಗರಿಕ ಯುದ್ಧದ ಸಂದರ್ಭದಲ್ಲಿ ದಕ್ಷಿಣ ಅಮೆರಿಕದ ಬಾಲಕಿಯರ ವಸತಿಶಾಲೆಯಲ್ಲಿ ನಡೆಯುವ ಘಟನೆಗಳನ್ನು ಆಧರಿಸಿದ ‘ಡ್ರಾಮಾ’ ಚಿತ್ರವಿದು.
ಹತ್ತೊಂಬತ್ತು ಚಿತ್ರಗಳು ಸ್ಪರ್ಧೆಯಲ್ಲಿವೆ. ಟಾಡ್ ಹೇನ್ಸ್ ನಿರ್ದೇಶನದ ‘ವಂಡರ್ಸ್ಟ್ರಕ್ಸ್’ ಚಿತ್ರ ಕೂಡ ಅನೇಕರಿಗೆ ಚರ್ಚೆಯ ವಸ್ತುವಾಗಿದೆ. 50 ವರ್ಷ ದೂರವಾಗಿರುವ ನಾಯಕ, ನಾಯಕಿಯ ಬದುಕಿನ ಬಿಂದುಗಳು ಸಂಧಿಸುವ ಕಥನ ಈ ಚಿತ್ರದಲ್ಲಿದೆ. ಬ್ಯಾಂಕ್ ದರೋಡೆಯ ಹಿನ್ನೆಲೆಯಲ್ಲಿ ನಡೆಯುವ ಘಟನೆಗಳನ್ನು ಇಟ್ಟುಕೊಂಡು ಹೆಣೆದ ‘ಗುಡ್ ಟೈಮ್’ ಚಿತ್ರವೂ ಸ್ಪರ್ಧೆ ಒಡ್ಡಬಹುದೆಂಬ ನಿರೀಕ್ಷೆ ಇದೆ. ‘ದಿ ಬೆಗ್ಯೂಲ್ಡ್’ ಹಾಗೂ ‘ಒಕ್ಜಾ’ ಸ್ಪರ್ಧೆಯಲ್ಲಿರುವ ಇನ್ನೆರಡು ಸತ್ವಯುತ ಚಿತ್ರಗಳು.
ಈ ಬಾರಿ ಉತ್ಸವದ ಪೋಸ್ಟರ್ ಗಮನಿಸಿದರೆ ಅದರ ಜೊತೆಯೂ ಒಂದು ಕಥೆ ಇರುವುದು ಗೊತ್ತಾಗುತ್ತದೆ. ಕ್ಲಾಡಿಯಾ ಕಾರ್ಡಿನೇಲ್ ಗೊತ್ತಿರಬೇಕಲ್ಲ? 1963ರಲ್ಲಿ ‘ದಿ ಲಿಯೊಪಾರ್ಡ್’ ಚಿತ್ರಕ್ಕೆ ಕಾನ್ ಚಿತ್ರೋತ್ಸವದಲ್ಲಿ ಪ್ರಶಸ್ತಿ ಪಡೆದ ನಟಿ ಅವಳು.
ಸುರುಳಿ ಸುತ್ತಿಕೊಂಡ ಅವಳ ಸ್ಕರ್ಟ್, ಗಾಳಿ ಸೋಕಿ ಹಾರಿದ ತಲೆಗೂದಲು ಮನದಲ್ಲಿ ಜೀವಂತಿಕೆಯ ಪ್ರತಿಮೆ ಮೂಡಿಸುವಷ್ಟು ಶಕ್ತ. ಪೋಸ್ಟರ್ನಲ್ಲಿ ಕಾಣುವ ಕ್ಲಾಡಿಯಾಳ ಚಿತ್ರವನ್ನು ಫೋಟೊಶಾಪ್ ತಂತ್ರಜ್ಞಾನ ಬಳಸಿ ಮರುರೂಪಿಸಲಾಗಿದ್ದು, ಅವಳ ಆಗಿನ ದೇಹಾಕಾರವನ್ನು ಸಣ್ಣಗೆ ಮಾಡಿದ್ದಾರೆ ಎಂದು ಚಿತ್ರೋತ್ಸವದ ವಿಶ್ಲೇಷಕರು ದೊಡ್ಡ ಲೇಖನವನ್ನೇ ಬರೆದಿದ್ದರು.
****
ಅಂದಿನಿಂದ ಇಂದಿನವರೆಗೆ...
ಫ್ರಾನ್ಸ್ನ ರಾಷ್ಟ್ರೀಯ ಶಿಕ್ಷಣ ಸಚಿವರಾಗಿದ್ದ ಜೀನ್ ಝೇ 1932ರಲ್ಲಿ ‘ಅಂತರರಾಷ್ಟ್ರೀಯ ಸಿನಿಮಾಟೊಗ್ರಫಿಕ್ ಚಿತ್ರೋತ್ಸವ’ ಆಯೋಜಿಸಬೇಕೆಂಬ ಪ್ರಸ್ತಾವ ಮುಂದಿಟ್ಟರು. ಬ್ರಿಟಿಷ್ ಹಾಗೂ ಅಮೆರಿಕನ್ ಚಿತ್ರ ಆಯೋಜಕರು ಜಂಟಿಯಾಗಿ ಇದನ್ನು ಸಾಕಾರಗೊಳಿಸಬಹುದು ಎನ್ನುವುದು ಅವರ ಸಲಹೆಯಾಗಿತ್ತು. ಅದು ಕಾನ್ ಚಿತ್ರೋತ್ಸವದ ಬೀಜ. 1946ರಲ್ಲಿ ‘ಫೆಸ್ಟಿವಲ್ ಡ್ಯು ಫಿಲ್ಮ್ ಡಿ ಕಾನ್’ ಪ್ರಾರಂಭವಾಯಿತು.
16 ದೇಶಗಳ ಚಿತ್ರಗಳು ಪ್ರದರ್ಶಿತವಾದವು. ‘ಸಮಾನತೆ’ ಮೊದಲ ಚಿತ್ರೋತ್ಸವದ ಮಂತ್ರವಾಗಿತ್ತು. ತೀರ್ಪುಗಾರರ ಸಮಿತಿಯಲ್ಲಿ ಇದ್ದುದು ಒಂದು ದೇಶದ ಒಬ್ಬ ಪ್ರತಿನಿಧಿಗಷ್ಟೇ ಅವಕಾಶ. 2002ರಲ್ಲಿ ಚಿತ್ರೋತ್ಸವಕ್ಕೆ ‘ಫೆಸ್ಟಿವಲ್ ಡಿ ಕಾನ್’ ಎಂದು ಅಧಿಕೃತವಾಗಿ ಹೆಸರು ಬದಲಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.