ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿಯಲ್ಲಿ ಸಾವಯವ ಸಂತೆ: ಜಿಲ್ಲಾಧಿಕಾರಿ

Last Updated 21 ಮೇ 2017, 8:59 IST
ಅಕ್ಷರ ಗಾತ್ರ

ಉಡುಪಿ: ಇಲ್ಲಿನ ದೊಡ್ಡಣಗುಡ್ಡೆಯ ತೋಟಗಾರಿಕಾ ಇಲಾಖೆಯ ಆವರಣದಲ್ಲಿ ಜೂನ್‌ ತಿಂಗಳಲ್ಲಿ ಸಾವಯವ ಉತ್ಪನ್ನಗಳ ಮಾರಾಟ ಕಾರ್ಯಕ್ರಮ ‘ಸಾವಯವ ಸಂತೆ’ ಅನ್ನು ಏರ್ಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ಹೇಳಿದರು.

ಸಾವಯವ ಸಂತೆ ಏರ್ಪಡಿಸುವ ಕುರಿತು ಶನಿವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಸ್ತುತ ಮಾರುಕಟ್ಟೆಯಲ್ಲಿ ಸಾವಯವ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಇದ್ದು, ಅದನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳುವುದರ ಜತೆಗೆ ಮಾರುಕಟ್ಟೆಯಲ್ಲಿ ನಡೆಯುವ ನಕಲಿ ಸಾವಯವ ಉತ್ಪನ್ನಗಳ ಮಾರಾಟದ ಹಾವಳಿಯನ್ನು ತಡೆಗಟ್ಟಲು ಹಾಗೂ ಸಾವಯವ ಬೆಳೆ ಬೆಳೆಯುವ ರೈತರಿಗೆ ಉತ್ತೇಜನ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದರು.

ರೈತರಿಗೆ ಪ್ರೋತ್ಸಾಹ ನೀಡುವುದರ ಜತೆಗೆ ಜನರಿಗೆ ಉತ್ತಮ ಗುಣಮಟ್ಟದ ಸಾವಯವ ಉತ್ಪನ್ನಗಳನ್ನು ದೊರಕಿಸುವ ಉದ್ದೇಶವನ್ನು ಹೊಂದಲಾಗಿದೆ. ಆ ಹಿನ್ನಲೆಯಲ್ಲಿ ಪ್ರತಿ ಭಾನುವಾರ ಸಂತೆ ನಡೆಯಲಿದ್ದು, ಬೇಡಿಕೆ ಹೆಚ್ಚಳವಾದರೆ ವಾರದಲ್ಲಿ 2 ದಿನ ಸಂತೆ ನಡೆಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಈ ಸಂತೆಯಲ್ಲಿ ಸಾವಯವ ರೈತರು ಬೆಳೆದ ತರಕಾರಿ ಮತ್ತು ಇತರೆ ಉತ್ಪನ್ನಗಳನ್ನು ಮಾತ್ರ ಮಾರಾಟ ಮಾಡಲು ಅವಕಾಶ ಕಲ್ಪಿಸಿದ್ದು, ಸಾವಯವ ಬೆಳೆ ಬೆಳೆಯುವ ನೊಂದಾಯಿತ ರೈತರು ತಮ್ಮ ಬೆಳೆಗಳನ್ನು ತಂದು ಮಾರಾಟ ಮಾಡಬಹುದಾಗಿದೆ. ಯಾವುದೇ ಮದ್ಯವರ್ತಿಗಳ ಹಾವಳಿಯಿಲ್ಲದೆ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವುದರಿಂದ ರೈತರಿಗೆ ಹೆಚ್ಚಿನ ಲಾಭ ದೊರೆಯಲಿದೆ.

ಅಲ್ಲದೆ, ಗ್ರಾಹಕರಿಗೂ ತಾಜಾ ಮತ್ತು ಗುಣಮಟ್ಟದ ಸಾವಯವ ತರಕಾರಿ ದೊರೆಯಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ‘ಈ ಸಂತೆಯಲ್ಲಿ ಜಿಲ್ಲೆಯ ರೈತರು ಬೆಳೆದ ಉತ್ನನ್ನಗಳು ಮಾತ್ರವಲ್ಲದೇ, ಹೊರ ಜಿಲ್ಲೆಗಳಲ್ಲಿ ಬೆಳೆಯುವ ವಿಶಿಷ್ಟ ಸಾವಯವ ಉತ್ಪನ್ನಗಳ ಮಾರಾಟಕ್ಕೂ ಸಹ ಅವಕಾಶವಿದೆ’ ಎಂದರು.

‘ಉಡುಪಿ ಸಾವಯವ ಮಾರಾಟ ಫೆಡರೇಷನ್‌ ವತಿಯಿಂದ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಆರೋಗ್ಯದ ದೃಷ್ಠಿಯಿಂದ ಸಾವಯವ ಉತ್ಪನ್ನಗಳ ಬಳಕೆ ಉತ್ತಮವಾಗಿದ್ದು, ಸಾರ್ವಜನಿಕರು ಈ ಸಂತೆಯ ಪ್ರಯೋಜನ ಪಡೆಯಬೇಕು’ ಎಂದು ಹೇಳಿದರು.

ಉಡುಪಿ ಜಿಲ್ಲಾ ಸಾವಯವ ಫೆಡರೇಷನ್‌ ಅಧ್ಯಕ್ಷ ದೇವದಾಸ ಹೆಬ್ಬಾರ್‌ ಮಾತನಾಡಿ, ‘ಉಡುಪಿ ಜಿಲ್ಲಾ ಫೆಡರೇಷನ್‌ ವತಿಯಿಂದ ಈಗಾಗಲೇ ಸಾವಯವ ಕುಚ್ಚಿಗೆ ಅಕ್ಕಿ, ತೆಂಗಿನ ಎಣ್ಣೆ, ಗೇರು ಬೀಜಗಳ ಮಾರಾಟಕ್ಕೆ ವ್ಯವಸ್ಥೆಯಿದ್ದು, ಬೇರೆ ಜಿಲ್ಲೆಗಳಿಂದ ಲಭ್ಯವಿರುವ ಇತರೆ ಸಾವಯವ ಉತ್ಪನ್ನಗಳನ್ನು ಈ ಸಂತೆಯಲ್ಲಿ ಮಾರಾಟ ಮಾಡಲು ವ್ಯವಸ್ಥೆ ಮಾಡಲಾಗುವುದು’ ಎಂದು ತಿಳಿಸಿದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಚಂದ್ರಶೇಖರ್‌ ನಾಯಕ್‌, ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಸಂಶೋಧನಾ ನಿರ್ದೇಶಕ ಡಾ. ಹನುಮಂತಪ್ಪ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಅಶೋಕ್‌ ಕುಮಾರ್‌ ಕೊಡ್ಗಿ, ತೋಟಗಾರಿಕೆ, ಪಶುಪಾಲನೆ, ಇತರೆ ಇಲಾಖಾಧಿ ಕಾರಿಗಳು ಹಾಗೂ ಸಾವಯವ ರೈತರು ಉಪಸ್ಥಿತರಿದ್ದರು.

* * 

ಸಾವಯವ ಉತ್ಪನ್ನಗಳನ್ನು ಹೆಚ್ಚಿನ ದರದಲ್ಲಿ ಮಾರಾಟ ಮಾಡಲಾಗುತ್ತಿದ್ದು, ಇದಕ್ಕೆ ತಡೆಯೊಡ್ಡುವ ಅನಿವಾರ್ಯತೆ ಇದೆ.
ಪ್ರಿಯಾಂಕ ಮೇರಿ ಫ್ರಾನ್ಸಿಸ್‌,
ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT