ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬಿಐಗೆ ವಹಿಸಲಿ: ಡಿವಿಎಸ್‌

ಐಎಎಸ್ ಅಧಿಕಾರಿ ಅನುರಾಗ್‌ ತಿವಾರಿ ಅನುಮಾನಾಸ್ಪದ ಸಾವು ಪ್ರಕರಣ
Last Updated 22 ಮೇ 2017, 5:44 IST
ಅಕ್ಷರ ಗಾತ್ರ

ಸುಬ್ರಹ್ಮಣ್ಯ:  ಐಎಎಸ್ ಅಧಿಕಾರಿ ಅನುರಾಗ್  ತಿವಾರಿ ಸಾವು ಅನುಮಾನಾಸ್ಪದವಾಗಿದ್ದು, ಇದು ಹಲವು ಸಂಶಯಗಳನ್ನು ಹುಟ್ಟು ಹಾಕಿದೆ. ಈ ಸಂಶಯಗಳಿಂದ ಹೊರ ಬರಲು ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾವಿನ ಪ್ರಕರಣವನ್ನು ಸಿಬಿಐ.ಗೆ ಹಸ್ತಾಂತರಿಸ ಬೇಕು ಎಂದು ಕೇಂದ್ರ ಸಾಂಖ್ಯಿಕ ಮತ್ತು ಅಂಕಿ ಅಂಶ ಅನುಷ್ಠಾನ ಸಚಿವ ಡಿ.ವಿ. ಸದಾನಂದ ಗೌಡ ಸಲಹೆ ನೀಡಿದರು.

ಖಾಸಗಿ ಕಾರ್ಯಕ್ರಮದ ನಿಮಿತ್ತ ಕುಕ್ಕೆ ಸುಬ್ರಹ್ಮಣ್ಯಕ್ಕೆ  ಭಾನುವಾರ ಭೇಟಿ ನೀಡಿದ ಅವರು, ಕ್ಷೇತ್ರದಲ್ಲಿ ದೇವರ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರ ಜೊತೆ ಅವರು ಮಾತನಾಡಿದರು.

‘ಅನುರಾಗ್ ತಿವಾರಿ ಒಬ್ಬ ದಕ್ಷ  ಅಧಿಕಾರಿ ಎಂಬುದರಲ್ಲಿ ಎರಡು ಮಾತಿಲ್ಲ. ಆಹಾರ ಇಲಾಖೆಗೆ ಸಂಬಂಧಿಸಿದ ಅವ್ಯವಹಾರ ಬಯಲಿಗೆ ತರುವ ಹಂತದಲ್ಲೆ ಅವರ ಸಾವು ಸಂಭವಿಸಿರುವುದು ಕುತೂಹಲ ಮತ್ತು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಅವರ ಸಾವಿನ ವಿಚಾರದಲ್ಲಿ ರಾಜ್ಯ ಸರ್ಕಾರ ರಾಜಕಾರಣ ಮಾಡುವುದು ಬಿಟ್ಟು ನೈಜ ತನಿಖೆಗೆ ಅನುವು ಮಾಡಿಕೊಡಲಿ. ಈ ಸಾವು  ಸಂಚಿನ ಭಾಗವಾಗಿಯೂ ಆಗಿರಬಹುದು’ ಎಂದು ಅವರು ಸಂಶಯ ವ್ಯಕ್ತಪಡಿಸಿದರು.

‘ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಮೇ 26ಕ್ಕೆ ಮೂರು ವರ್ಷವಾಗುತ್ತದೆ. ಚುನಾವಣೆ ಸಂದರ್ಭದಲ್ಲಿ ನೀಡಿದ ಎಲ್ಲ ಭರವಸೆಗಳನ್ನು  ಈಡೇರಿಸಿದ ಕೀರ್ತಿ ಸಲ್ಲುತ್ತದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶ ಗಮನ ಸೆಳೆಯುವಂತೆ ಆಡಳಿತ ನಡೆಸಿದ್ದು, ಆಡಳಿತದಲ್ಲಿ ಆರ್ಥಿಕ ಶಿಸ್ತನ್ನು ತರುವ ಮೂಲಕ ಸರ್ವಾಂಗೀಣ ಅಭಿವೃದ್ಧಿ ಸಾಧಿಸಿದೆ’ ಎಂದರು.

‘ನೋಟು ರದ್ಧತಿ ಮೂಲಕ ಭ್ರಷ್ಟಾಚಾರ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದು, ನಿರುದ್ಯೋಗ ನಿವಾರಣೆ, ಹಸಿರೀಕರಣ, ಇ –ಮಾರ್ಕೆಟಿಂಗ್, ಜನಧನ್ ಯೋಜನೆ, ಉಜ್ವಲ ಯೋಜನೆ, ಸುಕನ್ಯಾ ಸಮೃದ್ಧಿ, ಸ್ಟಾರ್ಟಪ್, ಡಿಜಿಟಲ್ ಇಂಡಿಯಾ ಯೋಜನೆ ಜಾರಿಯಲ್ಲಿ ಮಹತ್ತರ  ಸಾಧನೆ ನಡೆಸಿದೆ. ಕೃಷಿ ಸಿಂಚಯ ಯೋಜನೆ ಮೂಲಕ ರೈತರ ಜೀವನಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದೆ‘ ಎಂದರು.

‘ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ  ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ. ಪಕ್ಷದಲ್ಲಿ ಈಗ ಯಾವುದೇ ಗೊಂದಲ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೆ ಸಿಎಂ ಆಗುವ ಹಗಲು ಕನಸು ಕಾಣುತ್ತಿದ್ದಾರೆ’ ಎಂದು  ಲೇವಡಿ ಮಾಡಿದರು.

ಬಿಜೆಪಿ ಕಾರ್ಯಕರ್ತರು ಕೇಂದ್ರ ಸರಕಾರದ ಜನಪರ ಯೋಜನೆಗಳನ್ನು ಜನರ ಮುಂದಿಡುವ ಮೂಲಕ ಈ ಭಾರಿ ರಾಜ್ಯದಲ್ಲಿ ಪಕ್ಷ ಆಡಳಿತ ಚುಕ್ಕಾಣಿ ಹಿಡಿಯಲು ಸಹಕರಿಸುವಂತೆ ಅವರು ಮನವಿ ಮಾಡಿದರು.

ಸಚಿವರನ್ನು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಸ್ವಾಗತಿಸಿದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವ ಮಠಂದೂರು, ಬಿಜೆಪಿ ಮುಖಂಡ ಕೇಶವ ಬಜತ್ತೂರು, ಶೈಲೇಶ್ ಅಂಬೆಕಲ್ಲು  ಸಚಿವರ ಜತೆಯಲ್ಲಿದ್ದರು. ಮಾಸ್ಟರ್ ಪ್ಲಾನ್ ಮೇಲುಸ್ತುವಾರಿ ಸಮಿತಿ ಸದಸ್ಯ ಶಿವರಾಮ ರೈ, ಗೋಪಿನಾಥ್ ನಂಬಿಶ್, ಕೃಷ್ಣ ಮೂರ್ತಿ ಭಟ್, ಭರತ್ ಮುಂಡೋಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT