ಕೊಪ್ಪಳ: ಸಂಗೀತಕ್ಕೆ ನೋವು ಮರೆಸುವ ಶಕ್ತಿ ಇದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೃಷ್ಣಮೂರ್ತಿ ದೇಸಾಯಿ ಹೇಳಿದರು.
ನಗರದ ಗವಿಶ್ರೀ ಗ್ರಾಮೀಣಾಭಿವೃದ್ಧಿ ಹಾಗೂ ಶಿಕ್ಷಣ ಸೇವಾ ಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಭಾನುವಾರ ನಡೆದ ಗಾನಸುಧೆ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಜಿಲ್ಲೆಯಲ್ಲಿ ಅನೇಕ ಸಂಗೀತ ಪ್ರತಿಭೆಗಳಿವೆ. ಅಂಥ ಪ್ರತಿಭೆಗಳಿಗೆ ಇಲಾಖೆಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು. ಹೆಚ್ಚಿನ ಪ್ರತಿಭೆಗಳನ್ನು ಹೊರತರಬೇಕಿದೆ. ಆ ಮೂಲಕ ಜಿಲ್ಲೆಯಲ್ಲಿ ಸಂಗೀತ ಕ್ಷೇತ್ರವನ್ನು ಇನ್ನಷ್ಟು ವಿಸ್ತರಿಸಬೇಕಿದೆ. ಸಂಗೀತ ಸಾಧನೆಯ ಬಗ್ಗೆ ಮಾಹಿತಿ ನೀಡಬೇಕು.
ಬೇರೆಯವರ ಕಲೆಯ ಜತೆಗೆ ನಮ್ಮ ಸ್ವಂತಿಕೆಯನ್ನೂ ಬೆಳೆಸಿಕೊಳ್ಳಬೇಕು. ಈ ಕಲೆಗೆ ಯಾವುದೇ ವಯೋಬೇಧ ಇಲ್ಲ’ ಎಂದರು. ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗ್ರಂಥಪಾಲಕ ಪ್ರಕಾಶಗೌಡ ಎಸ್.ಯು.ಮಾತನಾಡಿ, ‘ಬಹುತೇಕ ಮಕ್ಕಳು ಟಿವಿ, ಮೊಬೈಲ್ನಂಥ ವಸ್ತುಗಳ ಮೇಲೆ ವ್ಯಾಮೋಹ ಹೊಂದಿದ್ದಾರೆ. ಅಂಥವರಲ್ಲಿ ಸಂಗೀತದ ಆಸಕ್ತಿ ಬೆಳೆಸಬೇಕು’ ಎಂದರು.
‘ಜಿಲ್ಲೆ ಸಾಂಸ್ಕೃತಿಕವಾಗಿ ಶ್ರೀಮಂತಿಕೆ ಹೊಂದಿದೆ. ಇಲ್ಲಿ ಸುಮಾರು 500 ಸಂಗೀತಗಾರರಿದ್ದಾರೆ. ಅವರೆಲ್ಲಾ ಹಲವು ವೃತ್ತಿಗಳಲ್ಲಿದ್ದರೂ ಪ್ರವೃತ್ತಿಯಲ್ಲಿ ಸಂಗೀತಗಾರರು. ಇಂಥ ಪ್ರತಿಭೆಗಳ ಸಂಖ್ಯೆ ಇನ್ನೂ ಹೆಚ್ಚಲಿ’ ಎಂದರು.
ಬಿ.ಪಿ.ಮರಿಗೌಡರ್ ಅಧ್ಯಕ್ಷತೆ ವಹಿಸಿದ್ದರು, ನಗರಸಭೆ ಸದಸ್ಯ ಪ್ರಾಣೇಶ ಮಹೇಂದ್ರಕರ್, ಎನ್.ಆರ್.ಕಬಾಡಿ ಇದ್ದರು. ಮಾರುತಿ ಚಿತ್ರಗಾರ, ಪ್ರಭಾಕರ ಪಟವಾರಿ, ಅನಂತ ಪಾವಣಸ್ಕರ್, ಶ್ರೀಶೈಲ ಬಡಿಗೇರ, ವಸಂತರಾವ್ ಪಟವಾರಿ, ಗುರುರಾಜ ಕುಲಕರ್ಣಿ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.