ಕೊಪ್ಪಳ: ನಗರದ ತಗ್ಗಿನಕೇರಿ ಓಣಿಯ ಮಹಮದ್್ ಗೌಸ್್ ಗೂದಿ ಅವರು ಬಂಡಿಗಳನ್ನು ತಯಾರಿಸಿ ಬಾಡಿಗೆಗೆ ನೀಡುವ ಭಿನ್ನ ಕಾಯಕ ಮಾಡಿಕೊಂಡಿದ್ದಾರೆ.
ಇದು ಅವರಿಗೆ ಬದುಕು ಕಟ್ಟಿಕೊಟ್ಟಿದೆ. ಆರ್ಥಿಕವಾಗಿ ಅಶಕ್ತರಾಗಿರುವ ಬೀದಿ ಬದಿಯ ವ್ಯಾಪಾರಿಗಳಿಗೆ ಇದರಿಂದ ಅನುಕೂಲವಾಗಿದೆ.
ಮಹಮದ್ ಅವರದ್ದು ವೆಲ್ಡಿಂಗ್ ವೃತ್ತಿ. ಬಿಡುವಿಲ್ಲದ ಕಾಯಕ. ಅದರ ನಡುವೆ ಅಲ್ಪ ಸ್ವಲ್ಪ ವೇಳೆ ಸಿಕ್ಕಾಗ ಗೂಡಂಗಡಿಯ ಪೆಟ್ಟಿಗೆ, ತಳ್ಳುಬಂಡಿಗಳನ್ನು ಸಿದ್ಧಪಡಿಸುತ್ತಾರೆ. ನಿತ್ಯದ ಕೆಲಸಗಳಲ್ಲಿ ಉಳಿದ ಕಬ್ಬಿಣ, ತಗಡು ಇವೇ ಕಚ್ಚಾ ವಸ್ತುಗಳು. ಅಗತ್ಯಬಿದ್ದರೆ ಹೊಸ ವಸ್ತುಗಳನ್ನು ಖರೀದಿಸಬೇಕಾಗುತ್ತದೆ.
ಹೊಸ ವ್ಯಾಪಾರ ಆರಂಭಿಸಲು ಬಯಸುವವರು, ಒಮ್ಮೆಲೆ ಬಂಡವಾಳ ಹೂಡಲು ಅಸಮರ್ಥರಾಗಿರುವವರು ಗೌಸ್ ಅವರ ನೆರವು ಪಡೆಯುತ್ತಾರೆ. ಕೆಲವರು ಖರೀದಿಸುವುದೂ ಇದೆ.
ಈ ಬಂಡಿಗಳು ಹಲವು ನಿರುದ್ಯೋಗಿಗಳಿಗೆ, ಮಹಿಳೆಯರಿಗೆ ಆಸರೆಯಾಗಿ ಬದುಕು ಕಟ್ಟಿಕೊಟ್ಟಿವೆ. ಹಲವರು ವ್ಯಾಪಾರವಾಗದೇ ಬಂಡಿಯನ್ನು ಮರಳಿಸಿದ್ದು ಇದೆ. ಇದ್ದರಿಂದ ಬಾಡಿಗೆ ಕೊಡುವವರಿಗೆ ಮತ್ತು ತೆಗೆದುಕೊಳ್ಳುವವರಿಗೆ ಯಾವುದೇ ನಷ್ಟ ಆಗುವುದಿಲ್ಲ ಎನ್ನುತ್ತಾರೆ ಮಹ್ಮದ್ಗೌಸ್. ಅವರ ಸಂಪರ್ಕ ಸಂಖ್ಯೆ: 9972706176
ಅನಿಲ್ ಬಾಚನಹಳ್ಳಿ
ಬಂಡಿಗೆ ಬೇಡಿಕೆ; ಬಳಕೆ
ಬಂಡಿ ತಯಾರಿಸಲು ಅದರ ಕಬ್ಬಿಣದ ವೆಚ್ಚಕ್ಕೆ ತಕ್ಕಂತೆ ₹15ರಿಂದ ₹25 ಸಾವಿರ ವ್ಯಯವಾಗುತ್ತದೆ. ಪ್ರತಿ ಬಂಡಿಗೆ ಪ್ರತಿ ದಿನಕ್ಕೆ ₹25ರಿಂದ ₹ 30 ಬಾಡಿಗೆ ತೆಗೆದುಕೊಳ್ಳುತ್ತೇವೆ. ಮೊದಲು 12 ಬಂಡಿಗಳಿದ್ದವು. ಅವುಗಳನ್ನು ಬಾಡಿಗೆಗೆ ತೆಗೆದುಕೊಂಡ ಹಲವರು ವ್ಯಾಪಾರ ವೃದ್ಧಿಸಿದ ಬಳಿಕ ಖರೀದಿ ಮಾಡಿದ್ದಾರೆ.
ಈ ವರ್ಷ 7 ಬಂಡಿಗಳು ಮಾರಾಟವಾಗಿವೆ. ಈಗ ಕೇವಲ 5 ಬಂಡಿಗಳು ಉಳಿದಿವೆ. ಒಂದು ಗೋಬಿ ಮಂಚೂರಿ ಸ್ಟಾಲ್, ಇನ್ನೊಂದು ಹೋಟೆಲ್ಗೆ, ಮತ್ತೊಂದು ಕುಷ್ಕಾ ವ್ಯಾಪಾರಕ್ಕಾಗಿ ಬಾಡಿಗೆ ತೆಗೆದುಕೊಂಡಿದ್ದಾರೆ.
ಇನ್ನು ಎರಡು ಬಂಡಿಗಳನ್ನು ಹಳ್ಳಿಯ ಜನರು ತೆಗೆದುಕೊಂಡು ಹೋಗಿದ್ದಾರೆ. ಈಗ ಇವುಗಳಿಂದ ತಿಂಗಳಿಗೆ ₹3,750 ಆದಾಯ ಬರುತ್ತದೆ. ಬಾಡಿಗೆ ತೆಗೆದುಕೊಂಡವರು ಬಂಡಿಗಳನ್ನು ಸ್ವಚ್ಛವಾಗಿಡದ ಕಾರಣ ಕಬ್ಬಿಣ ತಕ್ಕು ಹಿಡಿಯುತ್ತದೆ. ಇಂಥ ನಿರ್ಲಕ್ಷ್ಯದಿಂದ ಕೆಲವೊಮ್ಮೆ ನಷ್ಟವೂ ಆಗಿದೆ ಎನ್ನುತ್ತಾರೆ ಮಹಮದ್.
ಬಂಡಿಗಳ ಬಾಡಿಗೆ
* ₹25-30 ಪ್ರತಿ ದಿನದ ಬಾಡಿಗೆ
* ಬೇಡಿಕೆಯಿಡುವವರು ಎಗ್ರೈಸ್, ಚಹಾ, ಪಾನ್ ಸ್ಟಾಲ್ ವ್ಯಾಪಾರಿಗಳು
* ₹25 ಸಾವಿರಬಂಡಿ ತಯಾರಿಕೆ ವೆಚ್ಚ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.