‘ದೀನ ನಾ ಬಂದಿರುವೆ ಬಾಗಿಲಲಿ ನಿಂದಿರುವೆ...’ ಎಂಬಂತೆ ನಿಂತಿದ್ದ ಅನೇಕರಿಗೆ, ಸಾಹಿತ್ಯ– ಸಾಂಸ್ಕೃತಿಕ ಕ್ಷೇತ್ರದಿಂದ ಭರ್ತಿ ಮಾಡಬೇಕಾಗಿದ್ದ ವಿಧಾನ ಪರಿಷತ್ತಿನ ಖಾಲಿ ಸ್ಥಾನಗಳನ್ನು ರಾಜಕೀಯ ವ್ಯಕ್ತಿಗಳಿಂದ ಭರ್ತಿ ಮಾಡಿರುವುದರಿಂದ ನಿರಾಸೆ ಆಗಿರಬಹುದು.
ಅಂತೆಯೇ ಈಗ ವಿವಿಧ ಅಕಾಡೆಮಿಗಳ ಅಧ್ಯಕ್ಷ ಹಾಗೂ ಸದಸ್ಯ ಸ್ಥಾನದ ಕುರ್ಚಿಗಳೂ ಹಲವು ತಿಂಗಳಿಂದ ಖಾಲಿ ಇವೆ. ಅವುಗಳನ್ನು ಭರ್ತಿ ಮಾಡಿದರೆಷ್ಟು, ಬಿಟ್ಟರೆಷ್ಟು ಅನ್ನುವ ‘ಮೂಡ್’ನಲ್ಲಿ ಸರ್ಕಾರ ಇದೆ. ಹೇಳಿಕೇಳಿ ಇದು ಚುನಾವಣೆ ವರ್ಷ.
ಅಕಾಡೆಮಿಗಳ ಅಧ್ಯಕ್ಷರ ಹಾಗೂ ಸದಸ್ಯರ ಖಾಲಿ ಸ್ಥಾನಗಳನ್ನು ಇನ್ನಷ್ಟು ರಾಜಕೀಯ ವ್ಯಕ್ತಿಗಳು, ಹಿಂಬಾಲಕರಿಂದ ತುಂಬಿದರೆ ಅಂಥವರ ಖುರ್ಚಿ ದಾಹ ಒಂದಿಷ್ಟು ತಣಿದು, ಮುಂಬರುವ ಚುನಾವಣೆಯಲ್ಲಿ ಪಕ್ಷಕ್ಕೆ ಅನುಕೂಲ ಆಗಬಹುದು. ಸರ್ಕಾರ ಈ ಬಗ್ಗೆ ಚಿಂತಿಸಬೇಕು.
ನಮ್ಮ ಸಾಹಿತಿ, ಕಲಾವಿದರ ಬಳಗವು ಕುವೆಂಪು, ಕಾರಂತ, ತೇಜಸ್ವಿ, ಲಂಕೇಶರಂತಹವರ ಪರಂಪರೆಯನ್ನು ನೆನೆದು, ಖುರ್ಚಿ ದೌರ್ಬಲ್ಯ ಮರೆತು, ಸ್ವಲ್ಪ ಸ್ವಾಭಿಮಾನ, ಔದಾರ್ಯ ಮೆರೆದು ಸರ್ಕಾರದೊಂದಿಗೆ ಸಹಕರಿಸಬೇಕು!
ವೆಂಕಟೇಶ ಮಾಚಕನೂರ, ಧಾರವಾಡ