ಮಾನ್ವಿ: ‘ಉದಯೋನ್ಮುಖ ಬರಹ ಗಾರರು ಹಿರಿಯ ಲೇಖಕರ ಸಾಹಿತ್ಯಿಕ ಕೃತಿಗಳನ್ನು ಹೆಚ್ಚು ಅಧ್ಯಯನ ಮಾಡುವ ಮನೋಭಾವ ರೂಢಿಸಿಕೊಂಡರೆ ಅವರಿಂದ ಉತ್ತಮ ಸೃಜನಶೀಲ ಹಾಗೂ ಸಮಾಜಮುಖಿ ಸಾಹಿತ್ಯ ಹೊರಬರಲು ಸಾಧ್ಯ’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಬಸವಪ್ರಭು ಪಾಟೀಲ ಬೆಟ್ಟದೂರು ಹೇಳಿದರು.
ಪಟ್ಟಣದ ನಮ್ಮ ಮಾನ್ವಿ ಪದವಿ ಪೂರ್ವ ಕಾಲೇಜಿನಲ್ಲಿ ಭಾನುವಾರ ಪ್ರತೀಕ್ಷಾ ಪ್ರಭಾಕರ ಹೊಸಪಟ್ಟಣಕರ್ ಅವರ ‘ಹೀಗೊಂದು’ ಕವನ ಸಂಕಲನ ಬಿಡುಗಡೆ ಮಾಡಿ ಮಾತನಾಡಿದರು.
ಪ್ರತೀಕ್ಷಾ ಪ್ರಭಾಕರ ಹೊಸಪಟ್ಟಣ ಕರ್ ಮಾತನಾಡಿ, ‘ಮಹಿಳೆ ಹಾಗೂ ಪ್ರಕೃತಿ ಕುರಿತು ವಿದ್ಯಾರ್ಥಿ ದೆಸೆಯಿಂದ ಅನುಭವಕ್ಕೆ ಬಂದ ಸಂಗತಿಗಳ ಕುರಿತು ಕಾವ್ಯದ ರೂಪದಲ್ಲಿ ಬರೆದಿದ್ದೇನೆ. ಕೃತಿ ಹೊರತರುವುದು ತಂದೆ ದಿವಂಗತ ಡಾ.ಪ್ರಭಾಕರ ಅವರ ಕನಸಾಗಿತ್ತು. ಈಗ ಆ ಕನಸು ನನಸಾಗಿದೆ’ ಎಂದು ತಮ್ಮ ಸಾಹಿತ್ಯ ರಚನೆಗೆ ತಂದೆ, ತಾಯಿ ಪ್ರೇರೇಪಿಸಿದ ಕ್ಷಣಗಳನ್ನು ಸ್ಮರಿಸಿದರು.
ಕಲ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬಿಜೆಪಿ ಹಿರಿಯ ಮುಖಂಡ ಡಾ.ಟಿ. ಶರಣಪ್ಪ ಬಲ್ಲಟಗಿ, ಪಿಎಸ್ಐ ಮಂಜುನಾಥ, ಡಾ.ಪ್ರಜ್ಞಾ ಹರಿಪ್ರಸಾದ್, ಡಾ.ಹರಿಪ್ರಸಾದ್, ಅಕ್ಷಯ್ ಕೆ, ಶೈಲಜಾ ಸಿಂಧನೂರು, ಹಿರಿಯ ಸಾಹಿತಿ ಶರಣೇಗೌಡ ಯರದೊಡ್ಡಿ ಇದ್ದರು.